ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತನ್ನ ಜಿಐಎಸ್-ಆಧಾರಿತ ಯುಟಿಲಿಟಿ ಆಸ್ತಿ ನಿರ್ವಹಣಾ ವೇದಿಕೆ ‘ಜಲಪಥಕ್ಕಾಗಿ ಪ್ರತಿಷ್ಠಿತ ‘ಜಿಯೋಸ್ಪೇಷಿಯಲ್ ಎಕ್ಸಲೆನ್ಸ್ ಪ್ರಶಸ್ತಿ’ (Geospatial Excellence Award)ಗೆ ಭಾಜನವಾಗಿದೆ.
ಹೊಸ ದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ‘ಜಿಯೋಸ್ಮಾರ್ಟ್ ಇಂಡಿಯಾ 2025’ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಮ್ಮೇಳನದ ಸಮಾರೋಪ ಅಧಿವೇಶನದಲ್ಲಿ ಬಿಡಬ್ಲ್ಯುಎಸ್ಎಸ್ಬಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ಡಾ. ಮನೋಹರ್, “ಜಿಯೋಸ್ಪಾಷಿಯಲ್ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಆಸ್ತಿಗಳ ಡಿಜಿಟಲೀಕರಣ, ರಿಯಲ್ ಟೈಮ್ ಡೇಟಾ ಇಂಟಿಗೇಷನ್ನಲ್ಲಿ ಬೆಂಗಳೂರು ಜಲಮಂಡಳಿಯ ಸಾಧನೆಗಳನ್ನು ಗುರುತಿಸಿದೆ. ಈ ಮೂಲಕ ಸಾವಿರಾರು ನೀರು ಮತ್ತು ಒಳಚರಂಡಿ ಆಸ್ತಿಗಳನ್ನು ಏಕೀಕೃತ ವೇದಿಕೆಯಲ್ಲಿ ಕೇಂದ್ರೀಕರಿಸಲು ಸಹಾಯ ಮಾಡಿದೆ. ಇದು ಯೋಜನಾ ಪ್ರಕ್ರಿಯೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ” ಎಂದು ತಿಳಿಸಿದರು.
ಈ ಪ್ರಶಸ್ತಿಯು ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆಯನ್ನು ಒದಗಿಸುವ ಬದ್ದತೆಯನ್ನು ಪ್ರತಿಬಿಂಬಿಸುತ್ತದೆ. ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ದೂರದೃಷ್ಟಿಯಿಂದ ಈ ತಂತ್ರಜ್ಞಾನದ ಅಳವಡಿಕೆ ಸಾಧ್ಯವಾಗಿದೆ. ಜಲಮಂಡಳಿಯಲ್ಲಿ ಈ ಮಹತ್ವದ ತಂತ್ರಜ್ಞಾನ ಕಾರ್ಯಕ್ರಮ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಿದ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ತಂತ್ರಜ್ಞಾನ ಅಳವಡಿಕೆಗೆ ಚಾಲನೆ ನೀಡಿದ್ದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
“ಈ ಪ್ರಶಸ್ತಿಯು ನಮ್ಮ ಬಿಡಬ್ಲ್ಯುಎಸ್ಎಸ್ಬಿ ಎಂಜಿನಿಯರ್ಗಳು, ಜಿಐಎಸ್ ತಂಡಗಳು ಮತ್ತು ಈ ಪರಿವರ್ತನೆಯನ್ನು ನಿರ್ಮಿಸಿದ ನಮ್ಮ ಕ್ಷೇತ್ರ ಸಿಬ್ಬಂದಿಗೆ ಸೇರಿದ್ದು” ಎಂದು ಅವರು ತಿಳಿಸಿದರು.
ಭವಿಷ್ಯದ ಮೇಲೆ ಕೇಂದ್ರೀಕರಿಸಿದ ಜಲ ಜಾಲ ಬೆಂಗಳೂರು ಜಲಮಂಡಳಿಯು ‘ಜಲಪಥ’ ತಂತ್ರಜ್ಞಾನವನ್ನು ಇನ್ನಷ್ಟು ಆಧುನೀಕರಣಗೊಳಿಸಲಿದೆ. ಮುಂದಿನ ಹಂತದಲ್ಲಿ ಸುಧಾರಿತ ಭೌಗೋಳಿಕ-ಪ್ರಾದೇಶಿಕ ವಿಶ್ಲೇಷಣೆಗಳು, ಪ್ರಿಡಿಕ್ಟಿವ್ ಮೆಂಟೇನೇನ್ಸ್ ಉಪಕರಣಗಳು ಮತ್ತು ರೀಯಲ್ ಟೈಮ್ ಯೋಜನೆಗಳ ಮೇಲ್ವಿಚಾರಣೆಯನ್ನು ಮಾಡಲು ಅನುವು ಮಾಡಿಕೊಡಲಿದೆ. “ಈ ನವೀಕರಣಗಳು ಸೇವಾ ವಿತರಣೆಯನ್ನು ಬಲಪಡಿಸುತ್ತವೆ, ನೀರಿನ ನಷ್ಟವನ್ನು ಕಡಿಮೆ ಮಾಡುತ್ತವೆ ಮತ್ತು ಬೆಂಗಳೂರಿನ ಭವಿಷ್ಯಕ್ಕಾಗಿ ಸಿದ್ಧವಾಗಿರುವ ಜಲ ಜಾಲವನ್ನು ನಿರ್ಮಿಸಲಿವೆ ಎಂದು ಡಾ. ಮನೋಹರ್ ಹೇಳಿದರು.
ಸರ್ವೆ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ಬೆಂಗಳೂರು ಜಲಮಂಡಳಿಯ ಮುಖ್ಯ ಅಭಿಯಂತರರಾದ ಸನತ್ ಹಾಗೂ ಸಹಾಯಕ ಮುಖ್ಯ ಅಭಿಯಂತರಾದ ಮಹೇಶ್ವರಪ್ಪ ಉಪಸ್ಥಿತರಿದ್ದರು.





