ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಡೇನಹಳ್ಳಿ ಗ್ರಾಮಕ್ಕೆ ಸೇರಿದ ಗೋಮಾಳ ಜಮೀನಿನಲ್ಲಿ ತಾಲೂಕು ಆಡಳಿತ ವತಿಯಿಂದ ದಲಿತರ ಸ್ಮಶಾನ ಭೂಮಿಯನ್ನು ಗುರುತಿಸಿ ಹದ್ದು ಬಸ್ತು ಅಳತೆ ಮಾಡಿ, ಗಡಿಕಲ್ಲನ್ನು ಹಾಕಲಾಗಿತ್ತು. ಈ ಕಲ್ಲನ್ನು ಕಿಡಿಗೇಡಿಗಳು ಕಿತ್ತು ಹಾಕಿರುವ ಘಟನೆ ನಡೆದಿದೆ.
ಗುಬ್ಬಿ ತಾಲೂಕಿನ ಕಸಬ ಹೋಬಳಿ ಮಡೇನಹಳ್ಳಿ ಗ್ರಾಮದ ಸರ್ವೇ ನಂಬರ್ 55 ರಲ್ಲಿನ 12 ಎಕರೆ 31 ಗುಂಟೆ ಎಕರೆ ಪ್ರದೇಶದ ಗೋಮಾಳ ಜಮೀನಿನಲ್ಲಿ ಗುರುತಿಸಲಾಗಿದ್ದ 20 ಗುಂಟೆ ದಲಿತರ ಸ್ಮಶಾನ ಭೂಮಿ, 27 ಗುಂಟೆ ಸಾರ್ವಜನಿಕ ಸ್ಮಶಾನ ಭೂಮಿ ಗುರುತಿಸಿ ಹದ್ದುಬಸ್ತು ಅಳತೆ ಕಲ್ಲು ಎಲ್ಲ ಕಡೆ ನೆಡಲಾಗಿತ್ತು. ಕೆಲವು ದಿನಗಳಲ್ಲೇ ಗಡಿ ಕಲ್ಲುನ್ನ ಕಿಡಿಗೇಡಿಗಳು ಕಿತ್ತೊಗೆದಿದ್ದಾರೆ. ಈ ಬೆಳವಣಿಗೆಯ ವಿರುದ್ಧ ಮಡೇನಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸ್ಮಶಾನ ಭೂಮಿಗಾಗಿ ಹಲವು ವರ್ಷಗಳ ಬೇಡಿಕೆ ನಂತರ 12 ಎಕರೆ 31 ಗುಂಟೆ ಗೋಮಾಳ ಜಮೀನಿನಲ್ಲಿ ಒಟ್ಟಾರೆ 1 ಎಕರೆ 7 ಗುಂಟೆ ಜಮೀನನ್ನು ಎರಡು ಸ್ಮಶಾನಕ್ಕೆ ಮಂಜೂರಾಗಿ ಪಹಣಿ ಸೇರ್ಪಡೆ ಮಾಡಲಾಗಿತ್ತು. ನಂತರದ ಮತ್ತಷ್ಟು ದಿನಗಳು ಕಾದ ಗ್ರಾಮಸ್ಥರು ಸ್ಮಶಾನಕ್ಕಾಗಿ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ನೀಡಿದ ನಂತರ ಎಚ್ಚೆತ್ತ ತಾಲೂಕು ಆಡಳಿತ ಮತ್ತು ಸರ್ವೆ ಇಲಾಖೆ ಹದ್ದುಬಸ್ತು ಮಾಡಲು ಮುಂದಾಗಿ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿತ್ತು.
ಕೆಲ ದಿನಗಳ ಬಳಿಕ ಮತ್ತೊಮ್ಮೆ ಸರ್ಕಾರದ ವತಿಯಿಂದ ಸ್ಮಶಾನ ಭೂಮಿ ಜಿಪಿಎಸ್ ಮಾಡಿಸುವ ಜೊತೆಗೆ ತಾಲೂಕು ಆಡಳಿತ, ಸರ್ವೆ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಗಡಿ ಕಲ್ಲು ನೆಡುವ ಮೂಲಕ ಸ್ಮಶಾನ ಭೂಮಿ ಹದ್ದು ಬಸ್ತು ಮಾಡಲಾಗಿತ್ತು. ಆದರೆ ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ಭಾನುವಾರ ರಾತ್ರಿ ಕಿತ್ತಿದ್ದಾರೆ.
ಸ್ಮಶಾನ ಭೂಮಿಗೆ ಅಳವಡಿಸಿದ್ದ ಗಡಿಕಲ್ಲು ಕಿತ್ತಿರುವುದು ಸರಿಯಲ್ಲ. ಜೊತೆಗೆ ಸರ್ವೆ ನಂಬರ್ 55ರಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಬಲಾಢ್ಯರಿಂದ ಸರ್ಕಾರಿ ಗೋಮಾಳ ಜಮೀನು ಅಕ್ರಮ ಒತ್ತುವರಿಯಾಗಿದ್ದು, ಈ ಕೂಡಲೇ ಕ್ರಮ ವಹಿಸಬೇಕು ಎಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಶಿರೂರು ಗುಡ್ಡ ದುರಂತ | 8 ಮೀಟರ್ ಅಡಿಯಲ್ಲಿ ಲೋಹದ ಸಾಧನ ಪತ್ತೆ; ಲಾರಿಯಾಗಿರುವ ಶಂಕೆ?
“ಗಡಿ ಕಲ್ಲು ಕಿತ್ತು ಹಾಕಿರುವ ಬಗ್ಗೆ ಮಡೇನಹಳ್ಳಿ ಗ್ರಾಮಸ್ಥರಿಂದ ದೂರು ಅರ್ಜಿ ಬಂದಿದ್ದು ಕೂಡಲೇ ಸ್ಮಶಾನ ಭೂಮಿಯ ಜಾಗಕ್ಕೆ ನಾಮಫಲಕ ಹಾಕಿಸುವ ಜೊತೆಗೆ ಮತ್ತೊಮ್ಮೆ ನೆಟ್ಟಿರುವ ಎಲ್ಲ ಗಡಿಕಲ್ಲುಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬಣ್ಣ ಹಾಕಿಸಿ ಗುರುತಿಸಲಾಗುವುದು. ತದನಂತರವು ಇದೇ ರೀತಿಯ ಕೃತ್ಯ ಮುಂದುವರಿದರೆ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು” ಎಂದು ಜಿ. ಹೊಸಹಳ್ಳಿ ಗ್ರಾಮ ಪಂಚಾಯಿತಿ
ಅಭಿವೃದ್ಧಿ ಅಧಿಕಾರಿ ಭಾನುಮತಿ ಮಾಹಿತಿ ನೀಡಿದ್ದಾರೆ.





