ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆಗೆ 400 ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಅವರು ಇಂದು ವಿಜಯಪುರದಲ್ಲಿ 112 ನಗರ ಸಾರಿಗೆ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಇಂದು ಚಾಲನೆ ನೀಡಲಾದ ಒಟ್ಟು 112 ನೂತನ ನಗರ ಸಾರಿಗೆ ಬಸ್ ಗಳನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ, (Directorate of Urban Land Transport (DULT)) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯೋಜನೆಯಡಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ವಾಹನಗಳನ್ನು ವಿಜಯಪುರ ವಿಭಾಗಕ್ಕೆ 27, ವಿಜಯನಗರಕ್ಕೆ 25, ಕಲಬುರಗಿಗೆ 25, ರಾಯಚೂರಿಗೆ 18, ಬಳ್ಳಾರಿಗೆ 10, ಬೀದರಕ್ಕೆ 04 ಮತ್ತು ಯಾದಗಿರಿಗೆ 03 ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲಿರುವ 30 ಬಸ್ ಗಳನ್ನು ಅವಶ್ಯವಿರುವ ವಿಭಾಗ/ಘಟಕಕ್ಕೆ ನಿಯೋಜಿಸಲು ತೀರ್ಮಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 56 ಪ್ರತಿಷ್ಠಿತ ವಾಹನಗಳ ಸೇರ್ಪಡೆ ಮಾಡಲಾಗುತ್ತಿದ್ದು, ಕಾರ್ಯಾದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸದಾಗಿ 56 ಪ್ರತಿಷ್ಠಿತ ಬಸ್ ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಅದರಲ್ಲಿ, 20 ಎಸಿ ಸ್ಲೀಪರ್, 20 ನಾನ್ ಎಸಿ ಸ್ಲೀಪರ್ ಮತ್ತು 16 ಎಸಿ ಸೀಟರ್ ವಾಹನಗಳಾಗಿರುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ಅದೇ ರೀತಿ ಮುಂದಿನ ದಿನಗಳಲ್ಲಿ ಕ.ಕ.ರ.ಸಾ. ನಿಗಮಕ್ಕೆ ಹೊಸದಾಗಿ ಸೇರ್ಪಡೆಯಾಗಲಿರುವ 225 ವಿದ್ಯುತ್ ಚಾಲಿತ ವಾಹನಗಳನ್ನು ಸೇರಿಸಲಾಗುತ್ತಿದ್ದು, ಕಲಬುರಗಿ ಜಿಲ್ಲೆಗೆ 100, ವಿಜಯಪುರ ಜಿಲ್ಲೆಗೆ 75 ಮತ್ತು 50 ಬಸ್ಸುಗಳನ್ನು ಬಳ್ಳಾರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಸ್ಲಂ ನಿವಾಸಿಗಳ ಮೇಲೆ ಅಧಿಕಾರಿಗಳ ದರ್ಪ; 300 ಕುಟುಂಬಗಳು ಬೀದಿಪಾಲು
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್, ವಿಜಯಪುರ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್, ನಾಗಠಾಣ ಕ್ಷೇತ್ರದ ಶಾಸಕ ಕಟಕದೊಂಡ ವಿಠ್ಠಲ, ಕಕರಸಾ ನಿಗಮದ ಅಧ್ಯಕ್ಷರಾದ ಅರುಣ್ ಕುಮಾರ್ ಎಂ.ವೈ. ಪಾಟೀಲ್, ಕಕರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಶೀಲ ಸೇರಿದಂತೆ ಮತ್ತಿತತರರು ಉಪಸ್ಥಿತರಿದ್ದರು.





