ಮುಂಗಾರ ಬೆಳೆಗಳಾದ ಹತ್ತಿ, ಭತ್ತ, ತೊಗರಿಗಳಿಗೆ ಖರೀದಿ ಕೇಂದ್ರ ತೆಗೆದು ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಶಹಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಸಮಿತಿಯ ವತಿಯಿಂದ ತಹಶೀಲ್ದಾರ್ ಕಾರ್ಯಾಲಯದ ಎದುರುಗಡೆ ಪ್ರತಿಭಟನೆ ನಡೆಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, “ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಈ ವರ್ಷವು ರೈತನ ಮುಂಗಾರಿನ ಬೆಳೆಗಳಾದ ಹತ್ತಿ, ಭತ್ತ, ತೊಗರಿ, ಶೇಂಗಾ ಇನ್ನಿತರ ಬಹುತೇಕ ಎಲ್ಲಾ ಬೆಳೆಗಳು ನಾಶವಾಗಿವೆ. ಈ ಕಾರಣವಾಗಿ ರೈತನ ಬದುಕು ದಿಕ್ಕೆಟ್ಟು ಹೋಗಿದೆ” ಎಂದು ತಿಳಿಸಿದರು.

ಮಳೆ ಗಾಳಿಯಿಂದಾಗಿ ಮುಂಗಾರಿನ ಫಸಲುಗಳು ಸಂಪೂರ್ಣ ನೆಲಕ್ಕೆ ಬಿದ್ದು ಅದರಲ್ಲೂ ಹತ್ತಿ, ಮೆಣಸಿನಕಾಯಿ ಮತ್ತು ಭತ್ತ ಜಿಲ್ಲೆಯಲ್ಲಿ ಸಂಪೂರ್ಣ ಹಾಳಾಗಿದೆ. ಮಾರ್ಕೆಟ್ನಲ್ಲಿ ಧಾರಣೆ ಇರದೆ ಹತ್ತಿ ಕೂಡ ಮಾರಾಟ ಮಾಡಲು ತೊಂದರೆಯಾಗಿದೆ. ಇದಲ್ಲದೇ, ಹಿಂಗಾರಿನ ಬೆಳೆಗೆ ಅಣೆಕಟ್ಟಿನಿಂದ ನೀರು ಒದಗಿಸುವ ಸಲುವಾಗಿ ಕೂಡಲೆ ನೀರಾವರಿ ಸಲಹಾ ಸಮಿತಿ ತೀರ್ಮಾನ ತೆಗೆದುಕೊಂಡು ಪ್ರಕಟಿಸಬೇಕು. ತೀರ್ಮಾನ ಮಾಡುವುದರಿಂದ ಪೂರ್ವಭಾವಿ ತಯಾರಿಗಾಗಿ ರೈತ ತನ್ನ ಒಕ್ಕಲನ್ನು ಆರಂಭಿಸಲು ಅನುಕೂಲವಾಗುತ್ತದೆ. ಈ ಎಲ್ಲಾ ವಿಷಯವಾಗಿ ಸರ್ಕಾರವು ಕೂಡಲೆ ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಸಂಘವು ಆಗ್ರಹಪಡಿಸುತ್ತದೆ ಎಂದು ತಿಳಿಸಿದರು.
ಒಂದು ವೇಳೆ ಸರ್ಕಾರವು ಮೀನಮೇಷ ಎಣಿಸುತ್ತಾ ತಡಮಾಡಿದರೆ ರೈತ ಸಂಘವು ಅನಿವಾರ್ಯವಾಗಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಮುಖಂಡರು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಬಳ್ಳಾರಿ | ಹಳ್ಳಕ್ಕೆ ಬಿದ್ದ ಟ್ರ್ಯಾಕ್ಟರ್: ಈಜಿ ಜೀವ ಉಳಿಸಿಕೊಂಡ 14 ಮಂದಿ ಕಾರ್ಮಿಕರು
ಈ ಸಂದರ್ಭದಲ್ಲಿ ಶರಣು ಮಂದರವಾಡ, ನಾಗರತ್ನಮ್ಮ ವಿ. ಪಾಟೀಲ, ಮುದ್ದಣ್ಣ ಅಮ್ಮಾಪೂರ, ಮಲ್ಲಣ್ಣ ಹುಬ್ಬಳಿ, ಭೀಮರಾಯ ಎಲೇರಿ, ಮಲ್ಕಣ್ಣ ಚಿಂತಿ, ಸಿದ್ದಪ್ಪ ಗುಡ್ಡಕಾಯಿ, ಮಲ್ಲಣ್ಣ ನೀಲಹಳ್ಳಿ, ಶಂಕರ್ ಜಾಧವ, ಭೀಮರಾಯ ಯಡಹಳ್ಳಿ, ಸಾಹೇಬಲಾಲ್, ಮೈಹಿಬೂಬ ಸಾಬ್, ಕಾಶಿಮ ಸಾಬ್, ಬಸವರಾಜ, ಜಾಂದ್ ಪಾಸಾ, ಸಲಿಂ, ಪ್ರಕಾಶ ಸಜ್ಜನ್, ಪ್ರಭುಗೌಡ ರೆಡ್ಡಿ, ಚನ್ನಪ್ಪ, ನಭಿಲಾಲ್, ಯಲ್ಲಪ್ಪ, ಬಸವರಾಜ ಸಜ್ಜನ್, ಮಲ್ಲಪ್ಪ, ನಿಂಗಪ್ಪ, ದೆವಪ್ಪ, ತಾಯ್ಯಪ್ಪ, ಭೀಮರಾಯ, ಮೌನೇಶ, ಮಲ್ಲಿಕಾರ್ಜುನ, ಫಕೀರ ಅಹಮ್ಮದ್ ಇನ್ನಿತರರು ಉಪಸ್ಥಿತರಿದ್ದರು.
ಹಕ್ಕೊತ್ತಾಯಗಳು
1) ಜಿಲ್ಲೆಯಲ್ಲಿ ಶೀಘ್ರವೇ ಹತ್ತಿ ಖರೀದಿ ಕೇಂದ್ರ ಮತ್ತು ಭತ್ತ ಖರೀದಿ ಕೇಂದ್ರ ತೆರೆಯಬೇಕು.
2) ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನಿಗದಿಪಡಿಸಿಕೊಡುವಂತಾಗಬೇಕು.
3) ನೀರಾವರಿ ಸಲಹಾ ಸಮಿತಿಯ ತೀರ್ಮಾನವನ್ನು ಪ್ರಕಟಿಸಬೇಕು.
4) ಎಲ್ಲಾ ಬೆಳೆಗಳಿಗೆ ಸರ್ಕಾರವು ವೈಜ್ಞಾನಿಕ ಬೆಲೆ ನಿಗದಿಪಡಿಸಿ ಕೊಡುವಂತಾಗಬೇಕು.
5) ಕಾಳಸಂತೆಯಲ್ಲಿ ಮಾರಾಟ ಮಾಡುವ ಎಲ್ಲಾ ತರಹದ ಬೀಜಗಳನ್ನು ಅಧಿಕೃತ ಲೈಸೆನ್ಸ್ದಾರರಿಗೆ ಮಾರುವಂತೆ ಮತ್ತೊಮ್ಮೆ ಆದೇಶಿಸಬೇಕು.
6) ಶಹಾಪೂರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಬೀಜ ಮಾರಾಟ ಮಾಡಿದ ಅಡತಿದಾರನ ಪರವಾನಿಗೆಯನ್ನು ರದ್ದುಪಡಿಸಿ ಆತನ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು.






