ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲ ಸಿದ್ಧತೆ ಮಾಡಲಾಗಿದ್ದು, 14 ಕ್ಷೇತ್ರಗಳ 30,602 ಮತಗಟ್ಟೆಗಳಲ್ಲಿ 4 ಲಕ್ಷ ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಲ್ಲಿಯವರೆಗೆ ಮಾದರಿ ನೀತಿ ಸಂಹಿತೆಯಡಿ ಪ್ರಮುಖ ಉಲ್ಲಂಘನೆಗಳಿಗಾಗಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ವಿರುದ್ಧ ಒಟ್ಟು 189 ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ತಿಳಿಸಿದರು.
“ಶುಕ್ರವಾರ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳ 30,602 ಮತಗಟ್ಟೆಗಳಲ್ಲಿ 4 ಲಕ್ಷ ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಅವರಲ್ಲದೆ, 5,000 ಮೈಕ್ರೋ ಅಬ್ಸರ್ವರ್ಗಳು, 50,000 ಸಿವಿಲ್ ಪೊಲೀಸ್ ಸಿಬ್ಬಂದಿ, 65 ಅರೆಸೇನಾ ಪಡೆ ತುಕಡಿ ಮತ್ತಿತರ ರಾಜ್ಯಗಳ ಸಶಸ್ತ್ರ ಪೊಲೀಸ್ ಪಡೆಯನ್ನೂ ಈ ಮತಗಟ್ಟೆಗಳಲ್ಲಿ ಭದ್ರತೆಗೆ ನಿಯೋಜಿಸಲಾಗುವುದು” ಎಂದು ಆಯುಕ್ತರು ಮಾಹಿತಿ ನೀಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ – 2024 ರ ಅಂಗವಾಗಿ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್ ವೆಂಕಟೇಶ್ ಕುಮಾರ್ ಹಾಗೂ ಕೂರ್ಮರಾವ್ ಎಮ್ ಅವರು ಉಪಸ್ಥಿತರಿದ್ದರು.#ceokarnataka #LokaSabhaElection2024#live pic.twitter.com/Exa4I5H9Cl
— Chief Electoral Officer, Karnataka (@ceo_karnataka) April 24, 2024
“ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳನ್ನು ವೆಬ್ಕಾಸ್ಟ್ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲಾ 2,829 ಮತಗಟ್ಟೆಗಳನ್ನು ಶೇಕಡಾ 100ರಷ್ಟು ವೆಬ್ಕಾಸ್ಟ್ ಮಾಡಲಾಗುವುದು. ಚುನಾವಣಾಧಿಕಾರಿಗಳು ಮತ್ತು ವೀಕ್ಷಕರ ಕೋರಿಕೆಯಂತೆ ಈ ಕ್ಷೇತ್ರದಲ್ಲಿ ಎರಡು ಪಟ್ಟು ಅರೆ ಸೇನಾಪಡೆ ನಿಯೋಜಿಸಲಾಗುವುದು. ಏಪ್ರಿಲ್ 22ರಿಂದ ಏಳು ಅರಸೇನಾ ಪಡೆ ತುಕಡಿಯನ್ನು ಕ್ಷೇತ್ರಕ್ಕೆ ಕರೆಸಿಕೊಳ್ಳಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
23 ದ್ವೇಷ ಭಾಷಣ ಪ್ರಕರಣ ದಾಖಲು
ಈವರೆಗೆ ವಿವಿಧ ಪಕ್ಷಗಳ ವಿರುದ್ದ ಒಟ್ಟು 23 ದ್ವೇಷ ಭಾಷಣದ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಜೆಪಿ ವಿರುದ್ಧ 12 , ಕಾಂಗ್ರೆಸ್ ವಿರುದ್ಧ 9 ಹಾಗೂ ಜೆಡಿಎಸ್ ವಿರುದ್ದ 2 ಪ್ರಕರಣಗಳು ದಾಖಲಾಗಿವೆ.
ಪ್ರಚಾರದಲ್ಲಿ ಮಕ್ಕಳ ಬಳಕೆ ಪ್ರಕರಣದಲ್ಲಿ ತಲಾ 7 ಕೇಸ್ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ದಾಖಲಾಗಿದೆ. ಧಾರ್ಮಿಕ ಸ್ಥಳಗಳ ಬಳಕೆ ಸಂಬಂಧ 8 ಬಿಜೆಪಿ, 6 ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ 1 ಪ್ರಕರಣ ದಾಖಲಾಗಿದೆ. ಒಟ್ಟು 189 ಗಂಭೀರ ಸ್ವರೂಪದ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹಾಸನ ಪೆನ್ಡ್ರೈವ್ ಪ್ರಕರಣ ಸಂಬಂಧ ಕ್ರಮಕ್ಕೆ ಸೂಚನೆ
ಹಾಸನದಲ್ಲಿ ಪೆನ್ಡ್ರೈವ್ ದೊರೆತ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ, “ಪೆನ್ಡ್ರೈವ್ ಯಾರು ಬಿಸಾಕಿದ್ದಾರೆ ಎಂಬ ಮಾಹಿತಿ ಇಲ್ಲ. ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳುತ್ತಾರೆ. ಖಾಸಗಿ ದೂರಿನ ಮೇರೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ” ಎಂದರು.
ಮತಗಟ್ಟೆಗಳಲ್ಲಿ ವಿಶೇಷ ವೈದ್ಯಕೀಯ ಕಿಟ್
ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ವಿಶೇಷ ವೈದ್ಯಕೀಯ ಕಿಟ್ ವ್ಯವಸ್ಥೆ ಮಾಡಲಾಗಿದೆ. ನಿರ್ಜಲೀಕರಣ ಹಾಗೂ ಸನ್ಸ್ಟ್ರೋಕ್ ಸಂಬಂಧ ವೈದ್ಯಕೀಯ ಕಿಟ್ ವ್ಯವಸ್ಥೆಯನ್ನು ಮಾಡಲಾಗುವುದು. ಒಂಬತ್ತು ಕ್ಲಸ್ಟರ್ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ವಿವರಿಸಿದರು.
ಏಪ್ರಿಲ್ 26 ಮತ್ತು ಮೇ 7 ರಂದು ನಮ್ಮ ರಾಜ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂಗವಾಗಿ ಮಾನ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಚುನಾವಣೆಯ ಅಂತಿಮ ಪೂರ್ವ ತಯಾರಿ, ಮತದಾನದ ಅಂತಿಮ ಅಭ್ಯರ್ಥಿಗಳು ಮತ್ತು ರಾಜ್ಯದ ಮತದಾರರ ಪಟ್ಟಿ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಇಂದು ಸಭೆ ನಡೆಸಿದರು. pic.twitter.com/psWYEN245O
— Chief Electoral Officer, Karnataka (@ceo_karnataka) April 24, 2024
14 ಕ್ಷೇತ್ರಗಳಲ್ಲಿ ಒಟ್ಟು 2,88,19,342 ಮತದಾರರು
ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 2,88,19,342 ಮತದಾರರಿದ್ದು, ಈ ಪೈಕಿ 1,44,28,099 ಪುರುಷರು, 1,43,88,176 ಮಹಿಳೆಯರು ಮತ್ತು 3,067 ತೃತೀಯಲಿಂಗಿಗಳು ಇದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್ ವೆಂಕಟೇಶ್ ಕುಮಾರ್ ಹಾಗೂ ಕೂರ್ಮರಾವ್ ಎಮ್ ಉಪಸ್ಥಿತರಿದ್ದರು.





