ಕರ್ನಾಟಕದಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ನಾಳೆ(ಮಾ.20) ಆಗಲಿದೆ. ಇದಕ್ಕೂ ಮೊದಲು ಇಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ಆರಂಭವಾಗಿದ್ದು, ಈ ಸಭೆಯಲ್ಲಿ ರಾಜ್ಯವಾರು ಅಭ್ಯರ್ಥಿಗಳ ಹೆಸರನ್ನು ಬಹುತೇಕವಾಗಿ ಅಂತಿಮಗೊಳಿಸಲಾಗಿದೆ. ಸದ್ಯ ಬಿಡುಗಡೆ ಮಾಡಿರುವ ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಹೆಸರು ಬಹುತೇಕ ಹೊರಬಿದ್ದಿದೆ.

ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕೆಸಿ ವೇಣುಗೋಪಾಲ್, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ.

ಬೆಂಗಳೂರು ಉತ್ತರಕ್ಕೆ ರಾಜೀವ್ ಗೌಡ, ಬೆಂಗಳೂರು ದಕ್ಷಿಣ ಸೌಮ್ಯಾ ರೆಡ್ಡಿ, ಬೆಂಗಳೂರು ಸೆಂಟ್ರಲ್ಗೆ ಮನ್ಸೂರ್ ಆಲಿಖಾನ್, ಮೈಸೂರು ಕ್ಷೇತ್ರಕ್ಕೆ ಲಕ್ಷ್ಮಣ್, ರಾಯಚೂರು ಕ್ಷೇತ್ರಕ್ಕೆ ಕುಮಾರ ನಾಯಕ್, ಕೊಪ್ಪಳಕ್ಕೆ ರಾಜಶೇಖರ ಹಿಟ್ನಾಳ್, ಬೀದರ್ಗೆ ಸಾಗರ್ ಖಂಡ್ರೆ, ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ, ಉತ್ತರ ಕನ್ನಡಕ್ಕೆ ಅಂಜಲಿ ನಿಂಬಾಳ್ಕರ್, ದಕ್ಷಿಣ ಕನ್ನಡಕ್ಕೆ ಪದ್ಮರಾಜ್, ಚಿತ್ರದುರ್ಗಕ್ಕೆ ಚಂದ್ರಪ್ಪ, ಕಲಬುರಗಿಗೆ ರಾಧಾಕೃಷ್ಣ ದೊಡ್ಡಮನಿ, ಧಾರವಾಡಕ್ಕೆ ವಿನೋದ ಅಸೂಟಿ, ಬಾಗಲಕೋಟೆಗೆ ಸಂಯುಕ್ತ ಪಾಟೀಲ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗಡೆ, ಬೆಳಗಾವಿಗೆ ಮೃಣಾಲ್ ಹಾಗೂ ಚಿಕ್ಕೋಡಿಗೆ ಪ್ರಿಯಾಂಕಾ ಜಾರಕಿಹೊಳಿ ಸಂಭ್ಯಾವ್ಯ ಅಭ್ಯರ್ಥಿಗಳು ಎಂಬ ಮಾಹಿತಿ ಹೊರಬಿದ್ದಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಕ್ಷೇತ್ರ ಅಭ್ಯರ್ಥಿಗಳ ಇತ್ಯರ್ಥವಾಗಬಹುದು ಎಂದು ಹೇಳಲಾಗುತ್ತಿದ್ದರೂ, ಕೋಲಾರ ಕ್ಷೇತ್ರಕ್ಕೆ ಕೋಲಾರ ಎಲ್.ಹನುಮಂತಯ್ಯ ಅವರ ಹೆಸರು ಕೇಳಿಬಂದಿದೆ.





