ಕಾಸರಗೋಡು ಗಡಿನಾಡಿನ ಕನ್ನಡಿಗರ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕದ ಕನ್ನಡ ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಎಡನೀರು ಮಠದ ಸಭಾಂಗಣದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇರಳ ರಾಜ್ಯದ 100 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
“ಹೊರ ರಾಜ್ಯದಲ್ಲಿರುವ ಕನ್ನಡಿಗರ ಉದ್ಯೋಗ ಮೀಸಲಾತಿ ಜಾರಿಗೆ ತರುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಈ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡಿಗರ ಹಿತಕಾಯಲು ಸರಕಾರ ಬದ್ಧವಾಗಿದೆ. ಕರ್ನಾಟಕದ ಇತರ ಗಡಿಭಾಗಗಳಲ್ಲಿ ನಮ್ಮ ಸವಲತ್ತನ್ನು ಪಡೆದು ನಮ್ಮ ವಿರುದ್ಧವೇ ಮಾತನಾಡುತ್ತಾರೆ. ಆದರೆ ಕಾಸರಗೋಡಿನ ವಾತಾವರಣ ವಿರುದ್ಧವಾಗಿದೆ” ಎಂದರು.
ಕಾಸರಗೋಡಿನ ಕನ್ನಡ ಅಚ್ಚ ಕನ್ನಡವಾಗಿದೆ. ಇಲ್ಲಿ ಕನ್ನಡ ಭಾಷೆ ಸುರಕ್ಷಿತವಾಗಿದೆ. ಕಾಸರಗೋಡಿಗೆ ಬಂದಾಗ ಕೇರಳದಲ್ಲಿ ಇದ್ದೇನೆ ಎನ್ನುವ ಭಾವನೆ ಮೂಡುತ್ತಿಲ್ಲ. ಗಡಿ ಹೊರಗೆ ನಮ್ಮ ಕನ್ನಡದ ಹಿರಿಮೆ ಉನ್ನತ ಮಟ್ಟದಲ್ಲಿದೆ. ಎಡನೀರಿನಲ್ಲಿ ಕನ್ನಡ ಶಾಲೆಯನ್ನು ನಡೆಸುತ್ತಿರುವ ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರನ್ನು ಅಭಿನಂದಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದ ಶಾಲೆಗಳಿರುವುದು ಸಂತಸದ ವಿಚಾರವಾಗಿದೆ. ಗಡಿಭಾಗದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ನೆನಪಿಗಾಗಿ ಕನ್ನಡ ಭವನ ಕಟ್ಟಿಸುವ ಕೆಲಸ ನಡೆಯುತ್ತಿದೆ. ಈ ಭಾಗದಲ್ಲಿ ಶಾಲಾ ಕೊಠಡಿ, ಕನ್ನಡ ಭವನ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂದೆಯೂ ಇಲಾಖೆ ವತಿಯಿಂದ ಇಲ್ಲಿನ ಕನ್ನಡ ಶಾಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ಸಚಿವರು ಭರವಸೆ ನೀಡಿದರು.
ಕೇರಳದಲ್ಲಿ ಕನ್ನಡ ಭವನ ನಿರ್ಮಾಣದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸಚಿವರು, ಗೋವಾದಲ್ಲಿ ನಾವೇ ಹಣ ಕೊಡುತ್ತೇವೆ ಎಂದರೂ ಅಲ್ಲಿನ ಸರ್ಕಾರ ಕನ್ನಡ ಭವನ ನಿರ್ಮಾಣಕ್ಕೆ ಸ್ಥಳ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಭಾಷೆ ಹಾಗೂ ಕನ್ನಡದ ಮಹನೀಯರ ವಿಚಾರದಲ್ಲಿ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ಸಚಿವರು ಹೇಳಿದರು.
ಹಿರಿಯ ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರು ಮಾತನಾಡಿ, ಜಗತ್ತಿನಲ್ಲಿ ಎಲ್ಲ ಭಾಷೆಗಳು ಅದರದ್ದೇ ಆದ ಮಹತ್ವ ಹೊಂದಿದೆ. ಜಗತ್ತಿನಲ್ಲಿ 6 ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಎಷ್ಟೋ ಭಾಷೆಗಳಿಗೆ ವರ್ಣಮಾಲೆಗಳಿಲ್ಲ. ಇಂಗ್ಲಿಷ್ ಭಾಷೆ ಕಣ್ಣು ಬಿಡುವ ಮುನ್ನವೇ ಅಂದರೆ 500 ವರ್ಷಗಳ ಹಿಂದೆಯೇ ಕನ್ನಡ ಭಾಷೆಯಲ್ಲಿ ಪುರಾಣ ಹಾಗೂ ಮಹಾ ಕಾವ್ಯಗಳು ರಚನೆಯಾಗಿವೆ ಎಂದು ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದರು.
ಇದನ್ನು ಓದಿದ್ದೀರಾ? ಉತ್ತರ ಕನ್ನಡ ಬಿಜೆಪಿಯಲ್ಲಿ ಬಿರುಕು: ಸಭೆಯಿಂದ ಹೊರನಡೆದ ಕಾಗೇರಿ, ಕರೆಯಬೇಡಿ ಎಂದ ಅನಂತಕುಮಾರ್ ಹೆಗಡೆ
ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು, ಉದುಮ ಶಾಸಕ ಸಿ. ಎಚ್. ಕುಂಞಂಬು, ಕಾಸರಗೋಡು ಜಿ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಕೆ. ಪಿ. ಮಂಜುನಾಥ್ ಸಾಗರ್, ಬಹರೈನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಾಜಕುಮಾರ್. ನ್ಯಾಯವಾದಿ ಬಿ. ಸುಬ್ಬಯ್ಯ ರೈ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್ ಮತ್ತಿಹಳ್ಳಿ, ಜಿ. ಮಧುಸೂದನ್ ರೆಡ್ಡಿ, ಎ. ಆರ್. ಸುಬ್ಬಯ್ಯ ಕಟ್ಟೆ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಗಂಗಾಧರ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಪಿ. ಬಿ. ಶ್ರೀನಿವಾಸ್ ರಾವ್ ಮತ್ತಿತ್ತರರು ಭಾಗವಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಸ್ವಾಗತಿಸಿ ಪ್ರಾಸ್ತಾಪಿಸಿದರು. ದಾಮೋದರ ಬಾರಕ್ಕೂರು ನಿರೂಪಿಸಿದರು.





