- ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅನುವಾದಿಸಿರುವ “ಗಿಳಿಯು ಬಾರದೇ ಇರದು” ಪುಸ್ತಕ ಬಿಡುಗಡೆ
- ಪುಸ್ತಕ ಬಿಡುಗಡೆಗೊಳಿಸಿದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ
ಮನುಷ್ಯನ ಜೀವನದಲ್ಲಿ ಪುಸ್ತಕಗಳು ಅತ್ಯುತ್ತಮ ಸಹಚರರಾಗಿ, ಮಾರ್ಗದರ್ಶಿಯಾಗಿ ಹಾಗೂ ಜೀವನದ ಸ್ನೇಹಿತನಾಗಿರುತ್ತದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬೆಂಗಳೂರಿನ ಬಸವನಗುಡಿ ಎನ್.ಆರ್. ಕಾಲೋನಿಯಲ್ಲಿ ಡಾ. ಸಿ. ಅಶ್ವಥ್ ಕಲಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅವರು ಕನ್ನಡಕ್ಕೆ ಅನುವಾದ ಮಾಡಿರುವ ಗೋವಾದ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅವರ “ಗಿಳಿಯು ಬಾರದೇ ಇರದು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪುಸ್ತಕಗಳು ನಮಗೆ ಸ್ಫೂರ್ತಿ ನೀಡುತ್ತದೆ. ನಾವು ದುಃಖ ಮತ್ತು ಖಿನ್ನತೆಗೆ ಒಳಗಾದಾಗ ನಮಗೆ ಆತ್ಮವಿಶ್ವಾಸವನ್ನು ತುಂಬುತ್ತದೆ. ಒಳ್ಳೆಯ ಪುಸ್ತಕಗಳು ನಮ್ಮ ಮನಸ್ಸನ್ನು ಶಾಂತವಾಗಿಡಲು ಮತ್ತು ನಮ್ಮ ಆಲೋಚನೆಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಒಳ್ಳೆಯ ಪುಸ್ತಕಗಳು ಸ್ಫೂರ್ತಿ, ಜ್ಞಾನ, ನೈತಿಕ ಶಿಕ್ಷಣವನ್ನು ನೀಡುತ್ತವೆ ಮತ್ತು ಕೆಲವು ಪುಸ್ತಕಗಳು ಜನರ ಜೀವನದಲ್ಲಿ ಹೊಸ ತಿರುವು ತರುತ್ತವೆ. ಹಾಗಾಗಿ, ಪ್ರತಿಯೊಬ್ಬರು ಜೀವನದಲ್ಲಿ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜೀವನದ ನಿಜವಾದ ಸ್ನೇಹಿತನನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಪುಸ್ತಕವನ್ನು ಬರೆಯುವುದು ಎಷ್ಟು ಸವಾಲಿನ ಕೆಲಸ ಎಂದು ನಮಗೆಲ್ಲರಿಗೂ ತಿಳಿದಿದೆ. ಶ್ರೀಧರನ್ ಪಿಳ್ಳೈ ಅವರು ಸಣ್ಣ ಕಥೆಗಳ ಸರಣಿಯನ್ನು ಬರೆದರು ಮತ್ತು ಅವುಗಳನ್ನು ಪುಸ್ತಕವನ್ನಾಗಿ ಮಾಡಿದರು. ಇವರಿಗೆ ಬರವಣಿಗೆಯ ಉತ್ಸಾಹವಿದೆ, ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ತಮ್ಮ ಉತ್ಸಾಹವನ್ನು ಪೂರೈಸಲು ಪುಸ್ತಕವನ್ನು ಬರೆಯಲು ಸಮಯ ತೆಗೆದುಕೊಂಡು ಅಧ್ಯಯನ ಆಸಕ್ತಿಯನ್ನು ಹೆಚ್ಚಿಸುವ ಶ್ರೀಧರನ್ ಪಿಳ್ಳೈ ಅವರು ಈ ನಡೆ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ಪುಸ್ತಕವನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಗೋವಾದ ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳ್ಳೈ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಸುದರ್ಶನ್, ಹಿರಿಯ ಪತ್ರಕರ್ತೆ ಮೇರಿ ಜೋಸೆಫ್, ಸಾಹಿತಿ ಶೋಭಾ ರಾವ್, ವೀರ ಲೋಕ ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





