ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಎರಡು ವಾರದೊಳಗೆ ಪೊಲೀಸರಿಗೆ ಶರಣಾಗತಿಯಾಗುವಂತೆ ಆದೇಶ ನೀಡಿದ್ದರೂ, ಅನಾರೋಗ್ಯ, ಬೆಳೆ ಕೊಯ್ಲು ನೆಪವೊಡ್ಡಿ ಕೆಲ ಅಪರಾಧಿಗಳು ಶರಣಾಗತಿಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
“ಶರಣಾಗತಿಗೆ ಸಮಯ ವಿಸ್ತರಣೆ ಕೋರಿ ಅಪರಾಧಿಗಳು ಉಲ್ಲೇಖಿಸಿರುವ ಕಾರಣಗಳು ಅರ್ಹತೆಯ ಕೊರತೆಯನ್ನು ಹೊಂದಿವೆ” ಎಂದು ನ್ಯಾಯಾಲಯ ಹೇಳಿದ್ದು, ಜನವರಿ 8ರ ತೀರ್ಪಿನ ಪ್ರಕಾರ, ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವು ಜನವರಿ 21ರೊಳಗೆ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು” ಎಂದು ಕಟ್ಟಪ್ಪಣೆ ಹೊರಡಿಸಿದೆ.

“ಶರಣಾಗತಿಯನ್ನು ಮುಂದೂಡಲು ಮತ್ತು ಜೈಲಿಗೆ ಹಿಂದಿರುಗಲು ಅರ್ಜಿದಾರರು ಉಲ್ಲೇಖಿಸಿದ ಕಾರಣಗಳು ಯಾವುದೇ ಅರ್ಹತೆಯನ್ನು ಹೊಂದಿಲ್ಲ. ಏಕೆಂದರೆ ಆ ಕಾರಣಗಳು ನಮ್ಮ ನಿರ್ದೇಶನಗಳನ್ನು ಅನುಸರಿಸುವುದನ್ನು ಯಾವುದೇ ರೀತಿಯಲ್ಲಿ ತಡೆಯುವುದಿಲ್ಲ” ಎಂದು ಅರ್ಜಿಗಳನ್ನು ವಜಾಗೊಳಿಸುವಾಗ ನ್ಯಾಯಾಲಯವು ಹೇಳಿದೆ.
ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಸಮಯ ವಿಸ್ತರಣೆ ಕೋರಿ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಬಹು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ವಿಚಾರಣೆ ನಡೆಸಿತು.
ಇದನ್ನು ಓದಿ: ಬಿಲ್ಕಿಸ್ ಪ್ರಕರಣ । ಕೆಟ್ಟ ಕಾಲದಲ್ಲಿ ನ್ಯಾಯ ಗೆಲ್ಲಿಸಿದ ನ್ಯಾಯಮೂರ್ತಿ ನಾಗರತ್ನ
2002ರ ಗುಜರಾತ್ ಕೋಮು ಗಲಭೆಯ ವೇಳೆ, ಕೊಲೆ ಮತ್ತು ಸಾಮೂಹಿಕ ಅತ್ಯಾಚಾರಗೈದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲು ಗುಜರಾತ್ ಸರ್ಕಾರವು ನೀಡಿದ್ದ ಆದೇಶಗಳನ್ನು ಸುಪ್ರೀಂ ಕೋರ್ಟ್ ಜನವರಿ 8ರಂದು ರದ್ದುಗೊಳಿಸಿತ್ತು.
ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಪ್ರಕರಣದ ಹನ್ನೊಂದು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜನವರಿ 8ರಂದು ಆದೇಶಿಸಿತ್ತು. ಇವರಲ್ಲಿ ಮೂವರು ಅಪರಾಧಿಗಳು ಅನಾರೋಗ್ಯ, ಚಳಿಗಾಲದ ಬೆಳೆ ಕೊಯ್ಲು ಹಾಗೂ ಮಗನ ಮದುವೆಯಂತಹ ಕಾರಣಗಳನ್ನು ನೀಡಿ ಶರಣಾಗತಿಗೆ ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ(ಜ.19) ತಿರಸ್ಕರಿಸಿದೆ.





