ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಇಂದು(ಬುಧವಾರ) ಅನಿವಾಸಿ ಕನ್ನಡಿಗರ ಬಗ್ಗೆ ಸುಮಾರು 15 ನಿಮಿಷಗಳ ಸುದೀರ್ಘ ಚರ್ಚೆ ನಡೆಯಿತು. ಸ್ಪೀಕರ್ ಯು ಟಿ ಖಾದರ್, ವಿಧಾನಸಭೆಯಲ್ಲಿ ವಿಶೇಷ ಚರ್ಚೆಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಈ ಚರ್ಚೆ ನಡೆಸಲಾಯಿತು.
ಸ್ಪೀಕರ್ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದ ಅನಿವಾಸಿ ಕನ್ನಡಿಗರ ಬಗ್ಗೆ ವಿಧಾನ ಸಭಾಧ್ಯಕ್ಷರು ಪರಿಚಯ ಮಾಡುತ್ತಾ, ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣಅವರ ನೇತೃತ್ವದಲ್ಲಿ ಸುಮಾರು 15 ವಿವಿಧ ದೇಶಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವ ಅನಿವಾಸಿ ಕನ್ನಡಿಗರು ಅಲ್ಲಿದ್ದರೂ ಕೂಡ ತಮ್ಮ ಕನ್ನಡನಾಡಿನ ನೆಲವನ್ನು ಮರೆತಿಲ್ಲ. ಕನ್ನಡ ಸಂಸ್ಕೃತಿಯನ್ನು ಅಲ್ಲಿ ಪರಿಚಯಿಸಲು ಶ್ರಮಿಸುತ್ತಿದ್ದಾರೆ. ಅಲ್ಲಿ ದುಡಿದು ಬಂದ ಹಣದಲ್ಲಿ ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ಕೂಡ ಸಮಾಜದ ಎಲ್ಲ ವರ್ಗದವರಿಗೆ ನೆರವು ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.

“ಅನಿವಾಸಿ ಕನ್ನಡಿಗರು ತಮ್ಮ ಉದ್ಯಮಗಳಲ್ಲಿ ನಾಡಿನ ಬಹಳಷ್ಟು ಯುವಕರಿಗೆ ಉದ್ಯೋಗ ಕೊಡುವ ಮೂಲಕ ರಾಜ್ಯದ ಅಭಿವೃದ್ಧಿಗೂ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇವರೆಲ್ಲರನ್ನು ಸ್ಮರಿಸುವುದು ನಮ್ಮ ಕರ್ತವ್ಯ” ಎಂದು ಸ್ಪೀಕರ್ ಯು ಟಿ ಖಾದರ್ ತಿಳಿಸಿದರು.
ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, “ಅನಿವಾಸಿ ಕನ್ನಡಿಗರು ಬೇರೆ ಬೇರೆ ದೇಶಗಳಲ್ಲಿ ತಮ್ಮ ಜೀವನ ಕಟ್ಟಿಕೊಂಡು, ಯಶಸ್ವಿ ಉದ್ಯಮಿಯಾಗಿಯೂ ಯಶಸ್ಸು ಗಳಿಸಿದ್ದಾರೆ. ತಾವು ಗಳಿಸಿರುವ ಸಂಪತ್ತಿನಲ್ಲಿ ನಮ್ಮ ದೇಶ, ರಾಜ್ಯದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಅನಿವಾಸಿಗಳ ಸಮಸ್ಯೆಗಳ ಬಗ್ಗೆ ಪರಿಹಾರ ನೀಡಲು 2008ರಲ್ಲಿ ಕರ್ನಾಟಕ ಸರ್ಕಾರವು ಎನ್ಆರ್ಐ ಫೋರಂ ಅನ್ನು ರಚಿಸಿತ್ತು. ನಾನು ನಮ್ಮ ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷನಾಗಿ ಪ್ರಣಾಳಿಕೆ ತಯಾರಿಸುವ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರ ನಿಯೋಗವು ಮನವಿ ನೀಡಿದ್ದು, ಕೇರಳ ಸರ್ಕಾರದ ಮಾದರಿಯಲ್ಲಿ ಎನ್ಆರ್ಐ ಸಚಿವಾಲಯ ಮಾಡುವಂತೆ ಒತ್ತಾಯಿಸಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ಮಾಡಲು ನಮ್ಮ ಸರ್ಕಾರ ಕೂಡ ಬದ್ಧವಿದೆ” ಎಂದು ತಿಳಿಸಿದರು.

ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, “ಹಲವು ದೇಶಗಳಲ್ಲಿ ಕನ್ನಡ ಸಂಘಗಳು ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಬಹಳ ಗೌರವ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಹೆಚ್ಚಿನ ಜನರು ಹಲವು ದೇಶಗಳಲ್ಲಿ ನೆಲೆಸಿದ್ದಾರೆ. ಅಲ್ಲಿಗೆ ನಾವು ತೆರಳಿದಾಗ ಬಹಳ ಪ್ರೀತಿ-ಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ. ಅನಿವಾಸಿಗಳ ಜೊತೆಗಿನ ಸಂಬಂಧವನ್ನು ನಮ್ಮ ಸರ್ಕಾರವು ಗಟ್ಟಿಗೊಳಿಸಲು ಆಸಕ್ತಿ ವಹಿಸಿದೆ. ಈ ಸಂಬಂಧ ಇನ್ನಷ್ಟು ಗಟ್ಟಿಯಾದಲ್ಲಿ ಅನಿವಾಸಿ ಕನ್ನಡಿಗರ ಮೂಲಕ ರಾಜ್ಯಕ್ಕೂ ಹಲವು ಆರ್ಥಿಕ ನೆರವು ಸಿಗಲಿದೆ” ಎಂದು ಹೇಳಿದರು.
ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಕೂಡ ಇದೇ ವೇಳೆ ಮಾತನಾಡಿ, “ಅನಿವಾಸಿ ಭಾರತೀಯರು ತಮ್ಮ ಸಂಸ್ಕೃತಿಗಳನ್ನು ಮರೆಯದೆ ತಾವು ನೆಲೆಸಿರುವ ದೇಶಗಳಲ್ಲಿ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
ನಿಯೋಗದಲ್ಲಿ ಸೌದಿ ಅರೇಬಿಯಾದಿಂದ ಝಕರಿಯಾ ಜೋಕಟ್ಟೆ, ಸತೀಶ್ ಕುಮಾರ್ ಬಜಾಲ್, ಅಯಾಝ್ ಕೈಕಂಬ, ರಫೀಕ್ ಸೂರಿಂಜೆ, ಇಬ್ರಾಹಿಂ ರಖ್ವಾನ್, ಮುಹಮ್ಮದ್ ಫಿರೋಝ್ ಕಲ್ಲಡ್ಕ, ದುಬೈನಿಂದ ಹಿದಾಯತ್ ಅಡ್ಡೂರು, ಅಬುಧಾಬಿಯಿಂದ ಅಲ್ತಾಫ್, ಕತಾರ್ನಿಂದ ಅಬ್ದುಲ್ಲಾ ಮೋನು, ರವಿ ಶೆಟ್ಟಿ, ಶಾಕಿಬ್, ಮನ್ಸೂರ್, ಪ್ರದೀಪ್, ಪ್ರಸಾದ್ ಮತ್ತು ಶಶಿಧರ್ ನಾಗರಾಜ್ ಒಳಗೊಂಡಂತೆ ಆರು ವಿವಿಧ ದೇಶಗಳ 43 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಅನಿವಾಸಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಪರಿಷತ್ ಸದಸ್ಯರಾದ ಬಿಎಂ ಫಾರೂಕ್, ತೇಜಸ್ವಿನಿ, ಶಾಸಕರಾದ ಎನ್ ಎ ಹ್ಯಾರಿಸ್, ಅಶೋಕ್ ರೈ ಮತ್ತಿತರರನ್ನು ಭೇಟಿ ಮಾಡಿ, ಮಾತುಕತೆ ನಡೆಸಿತು.

ಕೇರಳ ಮಾದರಿಯಲ್ಲಿ ಅನಿವಾಸಿ ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಬೇಕು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಬಗ್ಗೆ ದತ್ತಾಂಶ ಸಂಗ್ರಹಣೆ ಮಾಡಬೇಕು, ಎನ್ಆರ್ಐಗಳಿಗೆ ಗುರುತಿನ ಚೀಟಿ ನೀಡಬೇಕು, ಎನ್ಆರ್ಐಗಳಿಗಾಗಿ ಮುಂದಿನ ಬಜೆಟ್ನಲ್ಲಿ 100 ಕೋಟಿ ಅನುದಾನ ಮೀಸಲಿಡಬೇಕು, ಎನ್ಆರ್ಐ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಸರ್ಕಾರ ಕೋಟಾದ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು, ಸೌದಿ ಅರೇಬಿಯಾದಲ್ಲಿ ಕನ್ನಡ ಭವನ ಸ್ಥಾಪನೆಗೆ ಸರ್ಕಾರ ಆಸಕ್ತಿ ವಹಿಸಬೇಕು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಎನ್ಆರ್ಐ ಕೇಂದ್ರ ಸ್ಥಾಪಿಸಬೇಕು, ಕರಾವಳಿಯಲ್ಲಿ ವಿಎಫ್ಎಸ್ ಕೇಂದ್ರ ಸ್ಥಾಪನೆ ಮುಂತಾದ ಪ್ರಮುಖ ಬೇಡಿಕೆಗಳ ಜೊತೆಗೆ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರಿಗೆ ನೀಡಲಾಗಿರುವ ಮನವಿ ಪತ್ರದಲ್ಲಿ ಅನಿವಾಸಿಗಳ ನಿಯೋಗವು ವಿನಂತಿಸಿದೆ.






