- ವಂಚನೆ ಪ್ರಕರಣದಲ್ಲಿ ಈವರೆಗೆ ಏಳು ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು
- ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣ
ರಾಜ್ಯಾದ್ಯಂತ ಚರ್ಚೆಗೀಡಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸ್ ವಶದಲ್ಲಿರುವ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಉಡುಪಿಯಲ್ಲಿ ಹೊಸ ಮನೆಯೊಂದು ಕಟ್ಟಿಸುತ್ತಿದ್ದರು ಎಂದು ತಿಳಿದುಬಂದಿದೆ.
ಚೈತ್ರಾ ಗೆಳೆಯನ ಹೆಸರಲ್ಲಿ ಮನೆ ಕಟ್ಟಿಸುತ್ತಿರುವುದು ಪತ್ತೆಯಾಗಿದ್ದು, ಜಾಗ ಖರೀದಿಸಿ, ಎರಡು ಅಂತಸ್ತಿನ ಮನೆ ಕಟ್ಟಲಾಗುತ್ತಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ.
ಉಡುಪಿ ಜಿಲ್ಲೆಯ ಕಾರ್ಕಳದ ಕಣಜಾರು ಪ್ರದೇಶದಲ್ಲಿ ಜಾಗ ಖರೀದಿ ಮಾಡಿದ್ದು, ವಂಚನೆ ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ಶ್ರೀಕಾಂತ್ ಹೆಸರಿನಲ್ಲಿ ಮನೆ ಕಟ್ಟಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಶ್ರೀಕಾಂತ್ನ್ನು ವಶಕ್ಕೆ ಪಡೆದ ಬಳಿಕ ಮನೆಯ ಕಾಮಗಾರಿ ಅರ್ಧದಲ್ಲೇ ನಿಂತಿದೆ ಎನ್ನಲಾಗುತ್ತಿದೆ.

20 ಸೆಂಟ್ಸ್ ಜಾಗದಲ್ಲಿ ಮನೆಯನ್ನು ಚೈತ್ರಾ ನೇತೃತ್ವದಲ್ಲಿ ಕಟ್ಟಿಸುತ್ತಿದ್ದು, ಮನೆ ಕಾಮಗಾರಿಯ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಆಗಾಗ್ಗೆ ಆ ಪ್ರದೇಶಕ್ಕೆ ಬರುತ್ತಿದ್ದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹೀಗಾಗಿ, ಮನೆಯ ಸಂಪೂರ್ಣ ವಿವರಗಳನ್ನು ಕಲೆ ಹಾಕುತ್ತಿರುವ ಸಿಸಿಬಿ ಪೊಲೀಸರ ತಂಡವೊಂದು ಆರೋಪಿ ಶ್ರೀಕಾಂತ್ನನ್ನು ಉಡುಪಿಗೆ ಕರೆದೊಯ್ದಿದ್ದಾರೆ. ಅಲ್ಲದೇ, ಮನೆಯನ್ನು ಜಪ್ತಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಚೈತ್ರಾ ಕುಂದಾಪುರ ಬೇನಾಮಿಯಾಗಿಯೂ ಕೆಲವು ಆಸ್ತಿ ವಿವರ ಹಾಗೂ ಲಕ್ಷಾಂತರ ರೂ.ಹಣವನ್ನು ಕೂಡ ಬ್ಯಾಂಕ್ ಲಾಕರಲ್ಲಿ ಇಟ್ಟಿರುವುದಾಗಿಯೂ ವರದಿಯಾಗಿದೆ.
ಗೋವಿಂದ ಬಾಬು ಪೂಜಾರಿ ಅವರಿಗೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ, ವಂಚಿಸಿದ ಆರೋಪದ ಮೇಲೆ ಪೊಲೀಸರು ಚೈತ್ರಾ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಈವರೆಗೆ ಒಟ್ಟು ಏಳು ಮಂದಿಯನ್ನು ಈವರೆಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ರಕರಣದ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ತಲೆಮರೆಸಿಕೊಂಡಿದ್ದಾರೆ.





