ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಚಳವಳಿ ತೀವ್ರಗೊಂಡಿದ್ದು, ಭಾನುವಾರ ಕಾರ್ಯಕರ್ತರು ಪಕ್ಷದ ಕಚೇರಿ ಗದ್ದಲ ಎಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಜಿಲ್ಲೆಯ ಈವರೆಗೆ ಪತ್ರ ಚಳವಳಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ‘ಗೋ ಬ್ಯಾಕ್’ ಚಳವಳಿ ಈಗ ಬೀದಿಗೆ ಬಂದಿದೆ. ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಭಾನು ಪ್ರಕಾಶ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಭಾನುವಾರ ನಡೆಯುತ್ತಿತ್ತು.
ಈ ವೇಳೆ ವೇದಿಕೆ ಬಳಿಗೆ ಬಂದ ಕಾರ್ಯಕರ್ತರು, ‘ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿ ಮಾಡಬಾರದು. ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. ಹತ್ತು ವರ್ಷಗಳಿಂದ ಸಂಸದೆಯಾಗಿರುವ ಶೋಭಾ ಅವರಿಗೆ ಪಕ್ಷದ ಬ್ಲಾಕ್ ಸಮಿತಿ ಮುಖಂಡರ ಪರಿಚಯವೇ ಇಲ್ಲ’ ಎಂದು ಹೇಳುತ್ತಾ ಆಕ್ರೋಶ ವ್ಯಕ್ತಪಡಿಸಿದರು.

“ಅಭ್ಯರ್ಥಿ ಯಾರು ಎಂಬುದು ಇನ್ನೂ ಇತ್ಯರ್ಥ ಆಗಿಲ್ಲ. ಶೋಭಾ ಅವರು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅವರೇ ಅಭ್ಯರ್ಥಿ ಎಂಬುದು ಈ ಮಾತಿನ ಅರ್ಥವೇ. ಯಾವುದೇ ಕಾರಣಕ್ಕೂ ಶೋಭಾ ಅವರಿಗೆ ಟಿಕೆಟ್ ನೀಡಬಾರದು” ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
“ಶೋಭಾ ಕರಂದ್ಲಾಜೆ ಮೂಲತಃ ದಕ್ಷಿಣಕನ್ನಡದವರು. ಉಡುಪಿ-ಚಿಕ್ಕಮಗಳೂರಿಗೂ ಅವರಿಗೂ ಸಂಬಂಧವೇ ಇಲ್ಲ. ಯಾವ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡುತ್ತಿದ್ದೀರಿ? ಗೆದ್ದ ಮೇಲೆ ಕ್ಷೇತ್ರದ ಕಡೆ ತಲೆಯನ್ನೇ ಹಾಕಿಲ್ಲ. ಈ ಹಿಂದೆ ಅತಿವೃಷ್ಟಿ ಉಂಟಾದಾಗ ಹಾಗೂ ಪ್ರಸ್ತುತ ಬರಗಾಲ ಬಂದರೂ ಸಂಕಷ್ಟದಲ್ಲಿರುವ ಸಂತ್ರಸ್ತರನ್ನು ಭೇಟಿ ಮಾಡಿಲ್ಲ” ಎಂದು ಹರಿಹಾಯ್ದರು.
ಕಾರ್ಯಕರ್ತರನ್ನು ಸಮಾಧಾನಪಡಿಸಲು ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ ಸೇರಿ ಹಲವು ಮುಖಂಡರು ಪ್ರಯತ್ನಿಸಿದರು. ಆದರೆ, ಸುಮ್ಮನಾಗದ ಕಾರ್ಯಕರ್ತರು, ಕಚೇರಿಯಿಂದ ಹೊರ ಬಂದು ಬಾಗಿಲ ಬಳಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶೋಭಕ್ಕ ಕಳುಹಿಸಿ-ಬಿಜೆಪಿ ಉಳಿಸಿ, ಬೇಡವೇ ಬೇಡ ಶೋಭಕ್ಕ ಬೇಡ ಎಂದು ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಸ್ಥಳೀಯರಿಗೆ ಮಾತ್ರ ಟಿಕೆಟ್ ಕೊಟ್ಟರೆ ನಾವು ಈ ಬಾರಿ ಮತ ಹಾಕುತ್ತೇವೆ. ಇಲ್ಲದಿದ್ದರೆ ಮತದಾನ ದಿನ ಎಲ್ಲರೂ ಮತ ಹಾಕದೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬಳಿಕ ಸ್ಥಳಕ್ಕೆ ಬಂದ ಸಿ.ಟಿ.ರವಿ, “ನಮ್ಮ ವೈಮಸ್ಸಿನಿಂದ ದೇಶಕ್ಕೆ ಆಪತ್ತು ಬರಬಾರದು. ಯಾರೇ ಅಭ್ಯರ್ಥಿಯಾದರೂ ಮೋದಿಯವರೇ ಅಭ್ಯರ್ಥಿ ಎಂದು ಭಾವಿಸಿ, ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
ನನ್ನ ಗ್ರಹಚಾರ ಸರಿ ಇರಲಿಲ್ಲ ಸೋತೆ: ಸಿ ಟಿ ರವಿ
2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋತ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿ. ಟಿ. ರವಿ, “ನನ್ನ ಗ್ರಹಚಾರ ಸರಿ ಇರಲಿಲ್ಲ, ಹಾಗಾಗಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತೆ. ಚುನಾವಣೆಯಲ್ಲಿ ಸೋಲಿಗೆ ನಂದೇ ತಪ್ಪು ಇರಬಹುದು ಎಂದು ಹೇಳಿದ್ದೆ. ನನ್ನ ಅತಿಯಾದ ವಿಶ್ವಾಸದಿಂದ ಸೋತಿದ್ದೇನೆ. ಅತಿ ವಿಶ್ವಾಸವೂ ಕೆಲವೊಮ್ಮೆ ಸೋಲಿಗೆ ಕಾರಣವಾಗುತ್ತೆ. ನಾನು ಮತ್ತೊಬ್ಬರ ಕಡೆ ಬೊಟ್ಟು ಮಾಡಲ್ಲ, ಅವರವರ ಕರ್ಮ ಅವರವರು ಅನುಭವಿಸಬೇಕು” ಎಂದು ಶೋಭಾ ಕರಂದ್ಲಾಜೆಯವರ ಹೆಸರೆತ್ತದೆ ಪರೋಕ್ಷವಾಗಿ ಮಾತನಾಡಿದರು.





