- ವಂಚನೆ ಪ್ರಕರಣ; ತನಿಖೆ ಚುರುಕುಗೊಳಿಸಿದ ಸಿಸಿಬಿ ಪೊಲೀಸರು
- ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ
ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿದ ಸಿಸಿಬಿ ಪೊಲೀಸರು, ಆರೋಪಿಯಾಗಿರುವ ಅಭಿನವ ಹಾಲಶ್ರೀ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ₹1.50 ಕೋಟಿ ಪಡೆದಿದ್ದ ಸಂಗತಿ ಬಯಲಾಗಿದೆ.
ವಂಚನೆ ಪ್ರಕರಣದ ಎ3 ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ ಅವರನ್ನು ವಿಚಾರಣೆ ನಡೆಸಿದ್ದು, ಸಾಕಷ್ಟು ಮಾಹಿತಿ ಕಲೆಹಾಕಿರುವುದಾಗಿ ವರದಿಯಾಗಿದೆ. ಲಿಖಿತ ಹೇಳಿಕೆ ಪಡೆದಿದ್ದು, ಬೆಂಗಳೂರು ಹಾಗೂ ಹಿರೇಹಡಗಲಿಗೆ ಕರೆದುಕೊಂಡು ಹೋಗಿ, ಮಹಜರು ಪ್ರಕ್ರಿಯೆಗಳನ್ನು ಪೂರೈಸುತ್ತಿದ್ದಾರೆ.
ಸೆ.29ರವರೆಗೆ ಸಿಸಿಬಿ ಕಸ್ಟಡಿಯಲ್ಲಿರುವ ಅಭಿನವ ಹಾಲಶ್ರೀ ಅವರಿಂದ ಉದ್ಯಮಿಯನ್ನು ನಂಬಿಸಿದ್ದು ಹೇಗೆ ಎಂಬ ಪ್ರಸಂಗಗಳ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
‘ದೂರುದಾರ ಗೋವಿಂದ ಬಾಬು ಪೂಜಾರಿಗೆ 2022ರ ಸೆಪ್ಟೆಂಬರ್ನಲ್ಲಿ ಕರೆ ಮಾಡಿದ್ದ ಚೈತ್ರಾ ಹಾಗೂ ವಿಶ್ವನಾಥ್ ಜೀ ಪಾತ್ರ ನಿರ್ವಹಿಸಿದ್ದ ರಮೇಶ್, ‘ಬೈಂದೂರಿನಿಂದ ಸ್ಪರ್ಧಿಸಲು ನಿಮಗೆ ಟಿಕೆಟ್ ನೀಡಲು ಬಿಜೆಪಿ ಕೇಂದ್ರದ ನಾಯಕರು ಒಪ್ಪಿದ್ದಾರೆ. ಕರ್ನಾಟಕದಲ್ಲಿ ಸೀಟು ಹಂಚಿಕೆ ಮಾಡಲು ಹೊಸಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಅವರ ಶಿಫಾರಸು ಬೇಕು. ಪ್ರಭಾವಿಗಳಾಗಿರುವ ಅವರನ್ನು ಭೇಟಿಯಾಗಿ’ ಎಂದಿದ್ದರು.

ಇದನ್ನು ನಂಬಿದ್ದ ಗೋವಿಂದ ಬಾಬು ಪೂಜಾರಿ, ಸ್ವಾಮೀಜಿಯನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಮನೆ ಹಾಗೂ ಹಿರೇಹಡಗಲಿ ಮಠದಲ್ಲಿ ಹಲವು ಬಾರಿ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ.
“ಸಮಿತಿಯಲ್ಲಿ ವಿಶ್ವನಾಥ್ ಜೀ ಅವರು ಹಿರಿಯರು. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಡಿಸಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರ ಜೊತೆಗೂ ನಾನು ನಿಕಟ ಸಂಪರ್ಕ ಇಟ್ಟುಕೊಂಡಿದ್ದೇನೆ. ನಿಮಗೆ ಟಿಕೆಟ್ ಕೊಡಿಸುತ್ತೇನೆ. ಇದಕ್ಕಾಗಿ 1.50 ಕೋಟಿ ನೀಡಬೇಕು” ಎಂದಿದ್ದರು. ಅಭಿನವ ಹಾಲಶ್ರೀ ಹೇಳಿಕೆಯನ್ನು ನಿಜವೆಂದು ನಂಬಿ, ಹಣ ನೀಡಿದ್ದರು.

ಆ ಬಳಿಕ ವಿಶ್ವನಾಥ್ ಜೀ ತೀರಿಕೊಂಡಿರುವುದಾಗಿ ಚೈತ್ರಾ ಹಾಗೂ ಇತರರ ಮಾತಿನಿಂದ ಅನುಮಾನಗೊಂಡು, ತಮ್ಮನ್ನು ವಂಚಿಸುತ್ತಿರುವುದು ಗೋವಿಂದ ಬಾಬು ಅವರಿಗೆ ತಿಳಿದುಬಂದಿತ್ತು. ಅವಾಗಲೇ, ನೀಡಿದ್ದ ಹಣ ವಾಪಸು ಪಡೆಯಲು ಸ್ವಾಮೀಜಿಯನ್ನು ಪುನಃ ಭೇಟಿಯಾಗಿದ್ದ ಸಂದರ್ಭದಲ್ಲಿ ತಾನು ಪಡೆದಿದ್ದ 1.50 ಕೋಟಿ ಹಣವನ್ನು ಮರಳಿಸುವುದಾಗಿಯೂ ತಿಳಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಆರೋಪ : ಸೋಷಿಯಲ್ ಮೀಡಿಯಾಗಳಲ್ಲಿ ಪತ್ರ ವೈರಲ್
ಈಗ ತನಿಖೆಯಲ್ಲಿ ತಿಳಿದು ಬರುತ್ತಿರುವ ಎಲ್ಲ ಅಂಶಗಳನ್ನು ಈ ಹಿಂದೆಯೇ ಉದ್ಯಮಿ ಗೋವಿಂದ ಬಾಬು ತಮ್ಮ ಸುದೀರ್ಘ ನಾಲ್ಕು ಪುಟಗಳ ಪತ್ರದಲ್ಲೂ ತಿಳಿಸಿದ್ದರು. ಈ ಪತ್ರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಈ ದಿನ.ಕಾಮ್ ಖುದ್ದು ಚೈತ್ರಾ ಕುಂದಾಪುರ ಹಾಗೂ ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯನ್ನು ಮಾತನಾಡಿಸಿ, ವರದಿ ಮಾಡಿತ್ತು.
ಆಗ ಚೈತ್ರಾ ಕುಂದಾಪುರ ಈ ದಿನ.ಕಾಮ್ನೊಂದಿಗೆ, “ಇವೆಲ್ಲವೂ ಸುಳ್ಳು ಸುದ್ದಿ. ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್ ಲೆಟರ್ಗಳನ್ನು ಹಾಕಿ, ನಮ್ಮ ತೇಜೋವಧೆ ಮಾಡುತ್ತಿರುವ ಬಗ್ಗೆ ಎಲ್ಲರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ಕೊಡುತ್ತೇವೆ” ಎಂದಿದ್ದರು.
ಈ ಬೆಳವಣಿಗೆ ನಡೆದು ಎರಡು ತಿಂಗಳ ಬಳಿಕ ಗೋವಿಂದ ಬಾಬು ಪೂಜಾರಿ ಬೆಂಗಳೂರಿನ ಬಂಡೇಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು.





