ಇಂದು ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಹಮಾಸ್ ಒಂದು ನೆಪ ಮಾತ್ರವಷ್ಟೇ, ಪ್ಯಾಲೆಸ್ತೀನ್ನ ಅನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದೇ ಇಸ್ರೇಲ್ನ ಗುರಿಯಾಗಿದೆ. ಹಾಗಾಗಿಯೇ, ಆಸ್ಪತ್ರೆ, ನಿರಾಶ್ರಿತರ ಶಿಬಿರಗಳು ಸೇರಿದಂತೆ ಎಲ್ಲ ಕಡೆ ಬಾಂಬ್ ದಾಳಿ ನಡೆಸುತ್ತಿದೆ ಎಂದು ಖ್ಯಾತ ಚಿಂತಕ, ಪತ್ರಕರ್ತ ಶಿವಸುಂದರ್ ಅಭಿಪ್ರಾಯಿಸಿದರು.
ಬೆಂಗಳೂರಿನ ಬಿಫ್ಟ್ ಸಭಾಂಗಣದಲ್ಲಿ ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಘಟಕದ ವತಿಯಿಂದ ಇಂದು ಹಮ್ಮಿಕೊಂಡಿದ್ದ ‘ಪ್ಯಾಲೆಸ್ತೀನ್ ಸಮಸ್ಯೆ: ಒಂದು ಅವಲೋಕನ’ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
23 ಲಕ್ಷ ಜನ ಗಾಝಾದ ಜನರನ್ನು ಈಜಿಪ್ಟಿನ ಸಿನಾಯ್ ಪ್ರದೇಶಕ್ಕೆ ಕಳುಹಿಸುವುದೇ ಇಸ್ರೇಲಿನ ಯೋಜನೆ. ಹೀಗಾಗಿಯೇ ಅದನ್ನು ಸಾಧಿಸುವ ನಿಟ್ಟಿನಲ್ಲಿ ಹಮಾಸ್ ನಡೆಸಿದ ರಾಕೆಟ್ ದಾಳಿಯನ್ನು ಇಸ್ರೇಲ್ ಬಳಸಿಕೊಳ್ಳುತ್ತಿದೆ. ಅದಕ್ಕಾಗಿ ಇಸ್ರೇಲ್ ಯಾವುದೇ ಅಂತಾರಾಷ್ಟ್ರೀಯ ಒತ್ತಡ ಬಂದರೂ ಸಂಘರ್ಷ ನಿಲ್ಲಿಸಲು ಒಪ್ಪುತ್ತಿಲ್ಲ ಎಂದು ತಿಳಿಸಿದರು.
100 ಶೇ. ಇದ್ದ ಪ್ಯಾಲೆಸ್ತೀನ್ನ ಭಾಗವನ್ನು ಶೇ. 22ರಷ್ಟನ್ನಾಗಿ ಇಂದು ಗಾಝಾವನ್ನು ಬಾಂಬ್ ದಾಳಿಗಳ ಮೂಲಕ ಗ್ಯಾಸ್ ಚೇಂಬರ್ ಆಗಿ ಪರಿವರ್ತನೆ ಮಾಡಲಾಗಿದೆ. ವೆಸ್ಟ್ ಬ್ಯಾಂಕ್ನಲ್ಲಿ ನೆಲೆಸಿರುವ ಪ್ಯಾಲೆಸ್ತೀನಿಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗುತ್ತಿದೆ. ಅವರ ಮನೆಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದು ಅನ್ಯಾಯವಲ್ಲದೇ ಇನ್ನೇನು? ಎಂದು ಶಿವಸುಂದರ್ ಕೇಳಿದರು.

ಜಗತ್ತಿನ ಬಲಪಂಥೀಯ ರಾಷ್ಟ್ರಗಳು ಇಸ್ರೇಲ್ ಅನ್ನು ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳನ್ನು ಮಾದರಿಯಾಗಿ ತೆಗೆದುಕೊಂಡಿದೆ. ಅದರ ಭಾಗವಾಗಿಯೇ ಇಂದು ಭಾರತದಲ್ಲಿ ಬಲಪಂಥೀಯರು ಇಂದು ಇಸ್ರೇಲ್ ಪರವಾಗಿ ನಿಲ್ಲುತ್ತಿದ್ದಾರೆ. ಈ ಸಂಘರ್ಷ ನಿಲ್ಲಲೇಕಿದೆ. ಭಾರತ ಯಾವತ್ತಿಗೂ ಪ್ಯಾಲೆಸ್ತೀನ್ನ ಜೊತೆಗೆ ನಿಂತಿದೆ. ಅದು ಮುಂದುವರಿಯಬೇಕು. ಈ ಸಂಘರ್ಷ ನಿಲ್ಲಬೇಕು ಎಂದು ಶಿವಸುಂದರ್ ಆಗ್ರಹಿಸಿದರು.
ಕಾರ್ಯಕ್ರಮದ ಸಭಾಂಗಣಕ್ಕೆ ಎರಡು ದಿನಗಳ ಹಿಂದೆ ಬೆಂಗಳೂರು ಪೊಲೀಸರು ಬೀಗ ಜಡಿದಿದ್ದ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಶಿವಸುಂದರ್, ಬಿಜೆಪಿಯಿಂದ ಬೇಸತ್ತಿದ್ದ ಜನ ರಾಜ್ಯದಲ್ಲಿ ಕಾಂಗ್ರೆಸ್ಗೆ ಅವಕಾಶ ನೀಡಿದ್ದು ವಾಕ್ ಸ್ವಾತಂತ್ರ್ಯವಾದರೂ ಇರಲಿ ಎಂದು. ಆದರೆ ಈ ಸರ್ಕಾರದ ನಡೆಯ ಬಗ್ಗೆಯೇ ಅನುಮಾನ ಮೂಡುತ್ತಿದೆ. ಹಾಗಾಗಿ, ಸರ್ಕಾರ ನಿಗ್ರಹಿಸಬೇಕಾದದ್ದು ಸಮಾಜ ವಿರೋಧಿಗಳನ್ನೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನಲ್ಲ. ಇದು ಮುಖ್ಯಮಂತ್ರಿಯವರಿಗೆ ಹಾಗೂ ಪೊಲೀಸ್ ಇಲಾಖೆಗೂ ತಲುಪಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ವಕೀಲ ಬಿ ಟಿ ವೆಂಕಟೇಶ್, ಪ್ಯಾಲೆಸ್ತೀನ್ನ ವಿಚಾರವಾಗಿ ಜಗತ್ತಿನಲ್ಲಿ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದಾಗ ಯೂರೋಪಿನ ರಾಷ್ಟ್ರಗಳು ಉಕ್ರೇನ್ ಬೆನ್ನ ಹಿಂದೆ ನಿಂತಿದ್ದವು. ಆದರೆ ಇಸ್ರೇಲ್ ಪ್ಯಾಲೆಸ್ತೀನ್ನ ಮೇಲೆ ನಡೆಸುತ್ತಾ ಇದೆ. ಯಾಕೆ ಮಾತೆತ್ತುಲ್ಲಿಲ್ಲ. ಪ್ಯಾಲೆಸ್ತೀನ್ನ 6 ಕೋಟಿ ಜನ ಬೇರೆ ಬೇರೆ ರಾಷ್ಟ್ರಗಳಲ್ಲಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ಹಮಾಸ್ ನಡೆಸಿದ ದಾಳಿಗೆ ಗಾಝಾ ಮೇಲೆ ನಡೆಸುತ್ತಿರುವ ದಾಳಿ ಯುದ್ಧ ಅಲ್ಲ, ಅದು ಜನಾಂಗೀಯ ಹತ್ಯೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ಪ್ಯಾಲೆಸ್ತೀನ್ನ ವಿಚಾರವಾಗಿ ಅದು ಮುಸ್ಲಿಮರ ದೇಶ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಅಲ್ಲಿ ಕ್ರಿಶ್ಚಿಯನ್ನರು, ಯಹೂದಿಗಳು ಕೂಡ ಹಲವಾರು ವರ್ಷಗಳಿಂದ ಬದುಕುತ್ತಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್, ಕರ್ನಾಟಕದಲ್ಲಿ ಇತ್ತೀಚಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ಮರೆತಂತಿದೆ. ಕಾರ್ಯಕ್ರಮದ ಸಭಾಂಗಣಕ್ಕೆ ಬೀಗ ಜಡಿದದ್ದು ನೋಡುವಾಗ ಸರ್ಕಾರ ಯಾರ ಪರವಾಗಿದೆ ಎಂದು ಗೊತ್ತಾಗುತ್ತಿಲ್ಲ. ಪ್ಯಾಲೆಸ್ತೀನ್ನ ಜನರ ಮೇಲೆ ನಡೆಯುತ್ತಿರುವ ಇಸ್ರೇಲಿನ ಅನ್ಯಾಯವನ್ನು ಜನರ ಮುಂದಿಡಬೇಕಿದೆ. ಇದೊಂದು ಮಾನವೀಯ ಬಿಕ್ಕಟ್ಟು. ಈ ಬಗ್ಗೆ ಹಾಗೂ ಪ್ಯಾಲೆಸ್ತೀನ್ನ ನೈಜ ಇತಿಹಾಸದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಇಸ್ರೇಲಿಗೆ ಆರ್ಥಿಕ ನೆರವು ನೀಡುತ್ತಿರುವ ಬಂಡವಾಳಶಾಹಿಗಳ ಉತ್ಪನ್ನಗಳನ್ನು ‘ಬಾಯ್ಕಾಟ್’ ಮಾಡಬೇಕಿದೆ ಎಂದು ತಿಳಿಸಿದರು.
ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ಗಾಂಧೀಜಿ ಹೇಳಿದಂತೆ ಹೇಗೆ ಇಂಗ್ಲೆಂಡ್ ಆಂಗ್ಲರದ್ದೋ, ಅದೇ ರೀತಿ ಪ್ಯಾಲೆಸ್ತೀನ್ ಪ್ಯಾಲೆಸ್ತೀನ್ಗಳದ್ದು. ಈ ಸ್ಪಷ್ಟವಾದ ನಿಲುವನ್ನು ಜಗತ್ತು ಅರಿತುಕೊಳ್ಳಬೇಕು. ಈ ಬಿಕ್ಕಟ್ಟಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ ಮಾತನಾಡಿ, ಈ ಸಂಘರ್ಷ ನಿಲ್ಲಿಸಲು ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬರಬೇಕು. ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಅನ್ಯಾಯ ನಿಲ್ಲಬೇಕು ಎಂದು ತಿಳಿಸಿದರು.
ಮುಹಮ್ಮದ್ ದಾನಿಶ್ ಕಾರ್ಯಕ್ರಮ ನಿರೂಪಿಸಿದರೆ, ನವಾಝ್ ಮಂಗಳೂರು ಧನ್ಯವಾದವಿತ್ತರು.

ಕಾರ್ಯಕ್ರಮದ ಕೊನೆಯಲ್ಲಿ ‘Solidarity with Palestine’ ಬ್ಯಾನರ್ ಪ್ರದರ್ಶಿಸಲಾಯಿತು.
ವಿಚಾರಗೋಷ್ಠಿಗೆ ಬಿಗಿ ಪೋಲಿಸ್ ಬಂದೋಬಸ್ತ್
ಇಂದು ಬಿಫ್ಟ್ ಸಭಾಂಗಣದಲ್ಲಿ ನಡೆದ ಪ್ಯಾಲೆಸ್ತೀನ್ ಪರವಾದ ಈ ವಿಚಾರಗೋಷ್ಠಿಗೆ ಪೊಲೀಸರ ಬಿಗಿ ಬಂದೋಬಸ್ತ್ ಇದ್ದದ್ದು ಕಂಡುಬಂತು.

ಸಭಾಂಗಣದ ಒಳಗೆ, ಸುತ್ತಮುತ್ತ ಸೇರಿ ಸುಮಾರು 10ರಿಂದ 15 ಪೊಲೀಸರು ಅಲ್ಲಲ್ಲಿ ಕಾಣಸಿಕ್ಕರು. ಎರಡು ದಿನಗಳ ಹಿಂದೆ ಇದೇ ಸಭಾಂಗಣದಲ್ಲಿ ಈ ವಿಚಾರಗೋಷ್ಠಿಗೆ ಅನುಮತಿ ನಿರಾಕರಿಸಿದ್ದ ಪೊಲೀಸರು, ಕೀ ಹಾಕಿ ಬೀಗ ಜಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.





