ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣ ಸಂಬಂಧ ಸಂಸದರ ತಾಯಿ ಭವಾನಿ ರೇವಣ್ಣ ಅವರ ಕಾರು ಚಾಲಕನಿಗೆ ವಿಶೇಷ ತನಿಖಾ ದಳ (ಎಸ್ಐಟಿ)ದ ತನಿಖೆ ಸಂಕಷ್ಟ ಎದುರಾಗಿದೆ.
ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್ಗೆ ಎರಡು ಬಾರಿ ಎಸ್ಐಟಿ ನೋಟಿಸ್ ಜಾರಿಗೊಳಿಸಿತ್ತು. ಆದರೆ ಈ ನೋಟಿಸ್ಗೆ ಪ್ರತಿಕ್ರಿಯಿಸದೆ ನಾಪತ್ತೆಯಾಗಿರುವ ಅಜಿತ್ ಪತ್ತೆಗೆ ಹಾಸನ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಇತರೆಡೆ ಎಸ್ಐಟಿ ಹುಡುಕಾಟ ನಡೆಸಿದೆ ಎಂದು ತಿಳಿದು ಬಂದಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಅಜಿತ್ ಪಾತ್ರ ವಹಿಸಿರುವ ಆರೋಪ ಕೇಳಿ ಬಂದಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಬಂಧನದ ಬಳಿಕ ಅಜಿತ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಬರುವಂತೆ ಹೊಳೆನರಸೀಪುರ ತಾಲೂಕಿನಲ್ಲಿರುವ ಅಜಿತ್ ಮನೆಗೆ ತೆರಳಿ ಎಸ್ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿದ್ದರು. ಆದರೆ ವಿಚಾರಣೆಗೆ ಮಾತ್ರ ಕಾರು ಚಾಲಕ ಆಗಮಿಸದೆ ನಾಪತ್ತೆಯಾಗಿದ್ದಾರೆ.
ಇನ್ನೊಂದೆಡೆ ಅಜಿತ್ ಸಂಪರ್ಕಿಸಲು ಅವರ ಕುಟುಂಬ ಸದಸ್ಯರ ಮೂಲಕ ಎಸ್ಐಟಿ ಪ್ರಯತ್ನ ವಿಫಲವಾಗಿದೆ. ಕೊನೆಗೆ ಕಾರು ಚಾಲಕನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಅಧಿಕಾರಿಗಳು ಕಾರ್ಯಾಚರಣೆಗಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಲೈಂಗಿಕ ದೌರ್ಜನ್ಯ ಹಗರಣ | ಪ್ರಜ್ವಲ್ ರೇವಣ್ಣನಿಗೆ ‘ಎಚ್ಚರಿಕೆ ಪತ್ರ’ ಬರೆದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ಬಳಿಗೆ ತೆರಳಿದ್ದ ಕಾರು ಚಾಲಕ ಅಜಿತ್, ಆಕೆಯ ಬಳಿ ತೆರಳಿ ಬಲವಂತದ ಹೇಳಿಕೆ ನೀಡುವಂತೆ ತಿಳಿಸಿದ್ದ. ಅಜಿತ್ ಹೇಳಿದಂತೆ ಸಂತ್ರಸ್ತೆ ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಆ ಬಳಿಕ ಆ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಕಾರು ಚಾಲಕನಿಗೂ ಎಸ್ಐಟಿ ನೋಟಿಸ್ ಜಾರಿಗೊಳಿಸಿತ್ತು. ಈಗ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ನೋಟಿಸ್ಗೆ ಉತ್ತರಿಸದ ಭವಾನಿ ರೇವಣ್ಣ?
ಇನ್ನು ಇದೇ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೀಡಿದ್ದ ನೋಟಿಸ್ಗಳಿಗೆ ಭವಾನಿ ರೇವಣ್ಣ ಕೂಡ ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ.
ಅಪಹರಣ ಪ್ರಕರಣದ ಎಫ್ಐಆರ್ನಲ್ಲಿ ಭವಾನಿ ರೇವಣ್ಣರವರ ಹೆಸರು ಕೂಡಾ ಉಲ್ಲೇಖವಾಗಿತ್ತು. ಈ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೊಳೇನರಸೀಪುರದಲ್ಲಿ ಮನೆಗೆ ತೆರಳಿ ಭವಾನಿ ಅವರಿಗೆ ಎರಡು ಬಾರಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ, ಇದುವರೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.





