“ದೇಶದ್ರೋಹ ಮಾಡುವವರು ಹಾಗೂ ದೇಶದ್ರೋಹದ ಹೇಳಿಕೆ ನೀಡುವವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಯಾಗಲಿ” ಎಂದು ಹೇಳುವ ಮೂಲಕ ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿವಾದ ಸೃಷ್ಟಿಸಿದ್ದಾರೆ.
ದಾವಣಗೆರೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುವ ವೇಳೆ ಈ ರೀತಿಯ ಹೇಳಿಕೆ ನೀಡಿದ್ದಾರೆ.
“ಸಂಸದ ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ದೇಶ ವಿಭಜನೆಯ ಹೇಳಿಕೆ ನೀಡಿದ್ದಾರೆ. ಇಬ್ಬರೂ ಕೂಡ ರಾಷ್ಟ್ರದ್ರೋಹಿಗಳು. ಇಂತಹ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು. ಕೊಲ್ಲುವ ಕಾನೂನು ತರಬೇಕು” ಎಂದು ಈಶ್ವರಪ್ಪ ನಾಲಗೆ ಹರಿಯಬಿಟ್ಟಿದ್ದಾರೆ.
“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಿ. ಅವರ ಪಕ್ಷದ ಡಿ.ಕೆ ಸುರೇಶ್, ವಿನಯ್ ಕುಲಕರ್ಣಿ ದೇಶ ಇಬ್ಭಾಗ ಮಾಡಬೇಕು ಅಂತ ಹೇಳುತ್ತಿದ್ದಾರೆ. ತಮ್ಮ ಪಕ್ಷದ ಸಂಸದರೇ ಹೇಳಿದಂತೆ ನೀವು ಉತ್ತರ ಭಾರತದ ಅಧ್ಯಕ್ಷರಾ? ಅಥವಾ ದಕ್ಷಿಣ ಭಾರತದ ಅಧ್ಯಕ್ಷರಾ? ಎಂದು ಸ್ಪಷ್ಟಪಡಿಸಿ” ಎಂದು ಈಶ್ವರಪ್ಪ ಎಂದು ಹೇಳಿಕೆ ನೀಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಮನವಿ ಮಾಡುತ್ತೇವೆ. ದೇಶ ಛಿದ್ರ ಮಾಡುವವರಿಗೆ, ಇಂತವರಿಗೆ ತಕ್ಕ ಪಾಠ ಕಲಿಸಿ. ದೇಶ ವಿಭಜನೆ ಮಾತು ಆಡುವವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ. ದೇಶ ತುಂಡು ಮಾಡುವ ಮಾತು ನೆಹರು ಕಾಲದಿಂದಲೂ ಬಂದಿದೆ. ಜಿನ್ನಾ ಸಂಸ್ಕೃತಿಯೇ ಡಿ.ಕೆ ಸುರೇಶ್ ಅವರಿಗೆ ಬಂದಿದೆ. ನಾವು ದೇಶವನ್ನು ಇಬ್ಭಾಗ ಮಾಡಲು ಬಿಡುವುದಿಲ್ಲ. ಬೇಕಾದರೆ ಪಾಕಿಸ್ತಾನವನ್ನೂ ಸೇರಿಸಿಕೊಂಡು ಅಖಂಡ ಭಾರತವನ್ನಾಗಿ ಮಾಡುತ್ತೇವೆ ” ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
“ಕಾಂಗ್ರೆಸ್ ನಾಯಕರಿಗೆ ಮೋದಿ ಅಂದರೆ ಎದೆ ನಡುಗುತ್ತದೆ. ಏಕೆಂದರೆ ಅವರ ಮನೆಯಲ್ಲಿ ಇರುವವರೆಲ್ಲ ಮೋದಿಗೆ ವೋಟ್ ಹಾಕ್ತೀವಿ ಎನ್ನುತ್ತಿದ್ದಾರೆ. ಗುಂಪಿನಲ್ಲಿ ಕೂಡಿದಾಗ ನಾನು ಕೂಡ ಮೋದಿಗೆ ವೋಟ್ ಹಾಕ್ತೀನಿ ಅಂತಾ ದೇಶಭಕ್ತ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ” ಎನ್ನುವ ಮೂಲಕ ಕಾಂಗ್ರೆಸ್ನಲ್ಲಿ ಕೂಡ ಮೋದಿ ಅಭಿಮಾನಿಗಳು ಇದ್ದಾರೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಸಿಎಂ ಜನತಾ ದರ್ಶನ | 12,372 ಸಾವಿರ ಅರ್ಜಿ ಸ್ವೀಕಾರ; ಕಂದಾಯ ಇಲಾಖೆಯದ್ದೇ ಹೆಚ್ಚು!
“900 ವರ್ಷಗಳ ಕಾಲ ಈ ದೇಶವನ್ನ ಮುಸ್ಲಿಮರು ಆಳಿದ್ದರು. ಕಾಶಿ, ಮಥುರಾ, ಅಯೋಧ್ಯೆಯಲ್ಲಿ ಮಸೀದಿಗಳೇ ತಲೆ ಎತ್ತಿದ್ದವು. ಭಾರತೀಯರು ಗುಲಾಮರು ಅಂತಾ ಬಾಬರ್ನ ಮಸೀದಿಗಳು ಹೇಳುತ್ತಿದ್ದವು. ಆದರೆ ಅಯೋಧ್ಯೆ ರಾಮಮಂದಿರದಿಂದ ಇಡೀ ದೇಶ ಒಂದುಗೂಡಿತು. ಇದೀಗ ಕಾಶಿ, ಮಥುರಾ ಸಹ ಹಿಂದೂಗಳ ಕೈ ಸೇರಿದರೆ ಹಿಂದೂಗಳಿಗೆ ಯಶಸ್ಸು ಸಿಕ್ಕಂತಾಗುತ್ತದೆ. ಅಲ್ಲದೇ ಅಯೋಧ್ಯೆಗೆ ಮುಸ್ಲಿಮರೂ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್ನವರಿಗೆ ಆತಂಕ ಶುರುವಾಗಿದೆ” ಎಂದು ಸದಾ ವಿವಾದಾತ್ಮಕ ಹೇಳಿಕೆ ನೀಡುವವುದರಲ್ಲಿ ಕುಖ್ಯಾತಿ ಪಡೆದಿರುವ ಈಶ್ವರಪ್ಪ ದಾವಣಗೆರೆಯಲ್ಲೂ ಅದನ್ನೇ ಮುಂದುವರಿಸಿದ್ದಾರೆ.





