ರಾಜ್ಯದ ಕಾಂಗ್ರೆಸ್ ಶಾಸಕರು, ಸಚಿವರುಗಳು ಪಕ್ಷದ ಚೌಕಟ್ಟು ಮೀರಿ ಬಹಿರಂಗವಾಗಿ ಮಾತನಾಡಬಾರದು. ಏನೇ ಸಮಸ್ಯೆಗಳಿದ್ದರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರ ಗಮನಕ್ಕೆ ತರಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
‘ಪಕ್ಷದ ಯಾವುದೇ ಶಾಸಕರಾಗಲೀ, ಸಚಿವರಾಗಲೀ ಪಕ್ಷದ ನಿಯಮ ಉಲ್ಲಂಘಿಸಿ ಬಹಿರಂಗವಾಗಿ ಮಾತನಾಡಬಾರದು. ವಿವಿಧ ಅಭಿಪ್ರಾಯಗಳು ಇರಬಹುದು. ಆದರೆ ಅದನ್ನು ಎಐಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ಅಥವಾ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಯವರ ಗಮನಕ್ಕೆ ತರಬಹುದು. ಇದನ್ನು ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದೇವೆ. ಒಂದು ವೇಳೆ ಪಕ್ಷದ ಚೌಕಟ್ಟು ಮೀರಿ ಇನ್ನು ಮುಂದೆ ಬಹಿರಂಗವಾಗಿ ಮಾತನಾಡಿದರೆ ವಿಪ್ ಜಾರಿ ಮಾಡಬೇಕಾಗುತ್ತದೆ. ವಿಪ್ ಜಾರಿಯವರೆಗೂ ಅದು ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಸುರ್ಜೇವಾಲ ತಿಳಿಸಿದರು.

‘ನಿಗಮ ಮಂಡಳಿಯ ಅಧ್ಯಕ್ಷರ ನೇಮಕದ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಸದ್ಯ ಮಧ್ಯಪ್ರದೇಶದ ಚುನಾವಣೆಯ ಉಸ್ತುವಾರಿ ನನಗೆ ಇದೆ. ಅದಕ್ಕೆ ಗಮನ ನೀಡಬೇಕಿದೆ. ಹಾಗಾಗಿ, ಅಲ್ಲಿನ ಚುನಾವಣೆ ಮುಗಿದ ಬಳಿಕ ಮತ್ತೆ ಕರ್ನಾಟಕಕ್ಕೆ ಬರಲಿದ್ದೇನೆ. ಆ ಬಳಿಕ ನಡೆಯುವ ಸಭೆಯ ಬಳಿಕ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದು ತಿಳಿಸಿದರು.
ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆ ಬಗ್ಗೆ ಶಾಸಕರ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲಾ, ಪಕ್ಷದ ಶಾಸಕರು, ಸಚಿವರಿಗೆ ಏನೆಲ್ಲ ಜವಾಬ್ದಾರಿ ಈಗಾಗಲೇ ನೀಡಲಾಗಿದೆಯೋ ಅದನ್ನು ಸಮರ್ಥವಾಗಿ ಮಾಡಿ ಎಂದು ಈಗಾಗಲೇ ಸೂಚಿಸಿದ್ದೇವೆ. ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಗಮನ ನೀಡಿ, ಆ ಮೂಲಕ ರಾಜ್ಯದ ಅಭಿವೃದ್ಧಿಯ ಬಗ್ಗೆ ತಮ್ಮ ಕೊಡುಗೆ ನೀಡಲಿ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿದೆ. ಕರ್ನಾಟಕ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ 20ರಿಂದ 25 ಸ್ಥಾನ ಗೆಲ್ಲುವ ಗುರಿ ಇದೆ. ಅದಕ್ಕಾಗಿ ಈಗಲೇ ಕೆಲಸಗಳನ್ನು ಆರಂಭಿಸಲು ಪಕ್ಷದ ಮುಖಂಡರಿಗೆ ಸೂಚಿಸಲಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಇದೇ ವೇಳೆ ತಿಳಿಸಿದರು.
‘ಇಂದು ನಡೆಸಿದ ಸಭೆಯಲ್ಲಿ ವೇಣುಗೋಪಾಲ್, ಸುರ್ಜೇವಾಲ ಅನೇಕ ವಿಚಾರ ಚರ್ಚಿಸಿದ್ದಾರೆ. ಎಐಸಿಸಿ ನಾಯಕರು ಅನೇಕ ಮಾರ್ಗದರ್ಶನ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ನಾವು ಕೂತು ಚರ್ಚೆ ಮಾಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.





