ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ, ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ಹಾಗೂ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್, “ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವೇ ತಪ್ಪು ಮಾಡಿದೆ ಅನ್ನುವುದು ಸರಿಯಲ್ಲ. ಅದೇ ರೀತಿ ಒಂದು ಸಮುದಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಕೂಡ ತಪ್ಪು. ಯುವತಿ ಹತ್ಯೆ ಬಳಿಕ ಕಾಂಗ್ರೆಸ್ ನಾಯಕರ ಹೇಳಿಕೆ ನೀಡುತ್ತಿರುವ ರೀತಿ ಸರಿಯಿಲ್ಲ. ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು” ಎಂದು ಸಂಸದೆ ವಿರೋಧ ವ್ಯಕ್ತಪಡಿಸಿದರು.
“ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಕೇಸ್ ವಿಚಾರವನ್ನು ನಾನು ಗಮನಿಸಿದ್ದೇನೆ. ಹಾಡಹಗಲೇ ಯುವತಿಯ ಹತ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಫೋಟೊ, ವೀಡಿಯೋಗಳು ಹರಿದಾಡುತ್ತಿವೆ. ಈಗಾಗಲೇ ಆಕೆ ಹತ್ಯೆ ನಡೆದುಹೋಗಿದೆ. ಇಂತಹ ಸಂದರ್ಭದಲ್ಲಿ ಯುವತಿಯ ನಡತೆಯ ಬಗ್ಗೆ ಮಾತನಾಡುವುದು ಬಹಳ ನೋವಿನ ವಿಚಾರ” ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.
“ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ತಪ್ಪು ಅನ್ನೋದು ಸರಿಯಲ್ಲ. ಅದೇ ರೀತಿ ಒಂದು ಸಮುದಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಕೂಡ ತಪ್ಪು. ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದ ಆರೋಪಿಯ ಎಫ್ಎಸ್ಎಲ್ ವರದಿ ಬರುವ ಮುನ್ನವೇ ಕಾಂಗ್ರೆಸ್ನವರು ಸಮರ್ಥನೆ ಮಾಡಿಕೊಂಡಿದ್ದರು. ಈಗ ಇದು ಲವ್ ಜಿಹಾದ್ ಅಲ್ಲ ಲವ್, ವೈಯಕ್ತಿಕ ಕಾರಣಕ್ಕೆ ಆಗಿರುವ ಕೊಲೆ ಅಂತಾ ಹೇಳಿಕೆ ನೀಡಿರುವುದು ತಪ್ಪು. ಸರ್ಕಾರ ಹೇಳಿಕೆ ಕೊಡುವ ಮೊದಲು ತಕ್ಷಣ ತಪ್ಪಿಸ್ಥನ ವಿರುದ್ಧ ಕ್ರಮ ಜರುಗಿಸಲಿ” ಎಂದು ಬಿಜೆಪಿ ನಾಯಕಿ ಸುಮಲತಾ ಅಂಬರೀಶ್ ಆಗ್ರಹಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಳವಳ್ಳಿಯಲ್ಲಿ ದರ್ಶನ್ ಪ್ರಚಾರ ನಡೆಸುತ್ತಿರುವ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದೆ, “ದರ್ಶನ್ ಈಗಾಗಲೇ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಅವರು ಯಾವುದೇ ಪಕ್ಷದ ಪರ ಪ್ರಚಾರ ಮಾಡಿಲ್ಲ. ಅವರಿಗೆ ಯಾರು ಇಷ್ಟವೋ ಅವರ ಪರ ಪ್ರಚಾರ ಮಾಡುತ್ತಾರೆ. ನಾನು ಸ್ಪರ್ಧೆ ಮಾಡಿದ್ದರೆ ನಮ್ಮ ಪರ ನಿಲ್ಲುತ್ತೇನೆ ಎಂದಿದ್ದರು. ಅದೇ ರೀತಿ ಅವರು ಪ್ರಚಾರ ಮಾಡಿದರು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಲೆಗಾರ ಮುಸ್ಲಿಂ; ಬಿಜೆಪಿಯ ತಟ್ಟೆಗೆ ಮೃಷ್ಟಾನ್ನ
“ದರ್ಶನ್ ಅವರೇನೂ ಸಣ್ಣ ಮಗುವಲ್ಲ. ಅವರಿಗೆ ಯಾರು ಸಹಾಯಕ್ಕೆ ಬಂದಿದ್ದಾರೋ ಅವರ ಪರವಾಗಿ ಪ್ರಚಾರ ಮಾಡ್ತಿದ್ದಾರೆ. ಇದನ್ನು ಮೊದಲಿಂದಲೂ ಹೇಳುತ್ತಿದ್ದಾರೆ. ಈ ವಿಚಾರಕ್ಕೆ ನಾನು ಅವರಿಗೆ ಏನನ್ನೂ ಹೇಳುವುದಿಲ್ಲ. ಮಂಡ್ಯದಲ್ಲಿ ನಾವು ತಟಸ್ಥವಾಗಿಲ್ಲ. ನಮ್ಮ ಅಭಿಮಾನಿಗಳು ಕೆಲಸ ಮಾಡುತ್ತಿದ್ದಾರೆ. ನಾನೇ ಕಾರಲ್ಲಿ ಹೋಗಿ ಮೈಕ್ ಹಿಡಿದು ಪ್ರಚಾರ ಮಾಡುವುದಿಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತದೋ ಆ ತೀರ್ಮಾನಕ್ಕೆ ಬದ್ಧಳಿದ್ದೇನೆ. ಪಕ್ಷವು ಸೂಚಿಸಿದರೆ ಮಂಡ್ಯದಲ್ಲೂ ಕೂಡ ಪ್ರಚಾರಕ್ಕೆ ನಾನು ಹೋಗುತ್ತೇನೆ” ಎಂದು ತಿಳಿಸಿದರು.





