ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಂದು ಪ್ರತಿಷ್ಠಾಪನೆಗೊಂಡ ರಾಮಲಲ್ಲಾದ ಸಮಾರಂಭದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 1990ರ ದಶಕದಲ್ಲಿ ಮುಲಾಯಂ ಸಿಂಗ್ ಸರ್ಕಾರ ಇದ್ದ ವೇಳೆ ಕರ ಸೇವಕರ ಮೇಲೆ ನಡೆದ ಗೋಲಿಬಾರ್ ಅನ್ನು ಪರೋಕ್ಷವಾಗಿ ಉಲ್ಲೇಖಿಸುವ ಮೂಲಕ, “ಅಯೋಧ್ಯೆಯ ಬೀದಿಗಳಲ್ಲಿ ಇನ್ಮುಂದೆ ಕರ್ಫ್ಯೂ, ಗುಂಡಿನ ಸದ್ದು ಕೇಳುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೂ ಮುನ್ನ ಮಾತನಾಡಿದ ಯೋಗಿ ಆದಿತ್ಯನಾಥ್, “ಅಯೋಧ್ಯೆಯ ಬೀದಿಗಳು ಇನ್ನು ಮುಂದೆ ಗುಂಡಿನ ಸದ್ದು ಅಥವಾ ಕರ್ಫ್ಯೂಗೆ ಸಾಕ್ಷಿಯಾಗುವುದಿಲ್ಲ. ಅಯೋಧ್ಯೆಯ ಪರಿಕ್ರಮದಲ್ಲಿ ಇನ್ನು ಮುಂದೆ ಯಾರೂ ಅಡ್ಡಿಯಾಗುವುದಿಲ್ಲ. ಬೀದಿ ಬೀದಿಗಳಲ್ಲಿ ದೀಪೋತ್ಸವ ಮತ್ತು ರಾಮೋತ್ಸವ ನಡೆಯಲಿದೆ. ರಾಮ ಕೀರ್ತನೆಗಳು ಗಲ್ಲಿಗಳಲ್ಲಿ ಪ್ರತಿಧ್ವನಿಸುತ್ತವೆ. ರಾಮ ಲಲ್ಲಾ ಪ್ರತಿಷ್ಠಾಪನೆಯು ರಾಮರಾಜ್ಯದ ಘೋಷಣೆಯನ್ನು ಸಹ ಸೂಚಿಸುತ್ತದೆ” ಎಂದು ಹೇಳಿದರು.
…क्योंकि अवधपुरी में श्री रामलला का विराजना, ‘रामराज्य’ की स्थापना की उद्घोषणा भी है। pic.twitter.com/t2QNxA3wVG
— Yogi Adityanath (@myogiadityanath) January 22, 2024
“ರಾಮಮಂದಿರದಲ್ಲಿನ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯು 500 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ದೇಶದ ಭಾವನಾತ್ಮಕ ಗಳಿಗೆಯಾಗಿದೆ. ದೇವಸ್ಥಾನವನ್ನು ಎಲ್ಲಿ ನಾವು ನಿರ್ಮಿಸಲು ಪಣ ತೊಟ್ಟಿದ್ದೇವೋ, ಅಲ್ಲಿಯೇ ಅದನ್ನು ಕಟ್ಟಲಾಗಿದೆ” ಎಂದು ಉತ್ತರ ಪ್ರದೇಶ ಸಿಎಂ ಯೋಗಿ ತಿಳಿಸಿದರು.
“ಭಾರತವು ಈ ದಿನಕ್ಕಾಗಿ ಅನೇಕ ವರ್ಷಗಳಿಂದ ಕಾದಿತ್ತು. ರಾಮಮಂದಿರದ 500 ವರ್ಷಗಳ ಸುದೀರ್ಘ ಬಯಕೆಯನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ. ನನ್ನ ಹೃದಯದಲ್ಲಿರುವ ಕೆಲವು ಭಾವನೆಗಳನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ಪ್ರತಿಯೊಬ್ಬರೂ ಭಾವುಕ ಹಾಗೂ ಸಂತುಷ್ಟರಾಗಿದ್ದಾರೆ. ಈ ಐತಿಹಾಸಿಕ ಕ್ಷಣದಲ್ಲಿ, ದೇಶದ ಪ್ರತಿ ನಗರ ಮತ್ತು ಹಳ್ಳಿಯೂ ಅಯೋಧ್ಯೆಯಾಗಿ ಬದಲಾಗಿದೆ ಮತ್ತು ಪ್ರತಿ ದಾರಿಯೂ ರಾಮ ಜನ್ಮಭೂಮಿ ಕಡೆಗೆ ಸಾಗುವಂತೆ ಕಾಣಿಸುತ್ತಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಧರ್ಮ, ದೇವರನ್ನು ಮುಂದಿಟ್ಟು ರಾಜಕಾರಣಿಗಳು ಪ್ರಶ್ನಾತೀತರಾಗುವುದು ನಾಡಿನ ಭವಿಷ್ಯಕ್ಕೆ ಅಪಾಯಕಾರಿ: ನಟ ಕಿಶೋರ್
“ದೊಡ್ಡ ಸಮುದಾಯವೊಂದು ತಮ್ಮ ದೇವರು ಸರಿಯಾದ ಸ್ಥಳದಲ್ಲಿ ನೆಲೆಯೂರಬೇಕು ಎಂದು ಹೋರಾಟ ನಡೆಸಬೇಕಾದ ಸ್ಥಿತಿ ಎದುರಾಗಿದ್ದು ಇತಿಹಾಸದಲ್ಲಿ ಇದೇ ಮೊದಲು. ಇಂದು ಇಡೀ ದೇಶವನ್ನು ರಾಮ ಮಾಯೆ ಆವರಿಸಿದೆ. ನಾವು ತ್ರೇತಾಯುಗಕ್ಕೆ ಕಾಲಿಟ್ಟಂತೆ ಭಾಸವಾಗುತ್ತಿದೆ. ದೀರ್ಘ ಸಮಯದ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕ” ಎಂದು ಮೋದಿಯವರನ್ನು ಹೊಗಳಿದರು.





