- ತೇಲಿ ಸಮುದಾಯಕ್ಕೆ ಸೇರಿದವರು ಪ್ರಧಾನಿ ನರೇಂದ್ರ ಮೋದಿ
- 2000ದಲ್ಲಿ ತೇಲಿ ಸಮುದಾಯವನ್ನು ಒಬಿಸಿಗೆ ಸೇರಿಸಿದ್ದು ಬಿಜೆಪಿ
“ಪ್ರಧಾನಿ ನರೇಂದ್ರ ಮೋದಿ ಸಂಸತ್ನಲ್ಲಿ ಸುದೀರ್ಘ ಭಾಷಣ ಬಿಗಿದು, ತಮ್ಮನ್ನು ತಾವು ಒಬಿಸಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ಹುಟ್ಟುವಾಗಲೇ ಒಬಿಸಿ ಸಮುದಾಯಕ್ಕೆ ಸೇರಿದವರಾಗಿರಲಿಲ್ಲ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ಜಾತಿಗಣತಿಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಸಂಸತ್ನ ಬಜೆಟ್ ಅಧಿವೇಶನದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಕೆಲವರು ಒಬಿಸಿ ಸಮುದಾಯದವರು ಉನ್ನತ ಅಧಿಕಾರದಲ್ಲಿ ಇಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ, ಒಬಿಸಿಗೆ ಸೇರಿರುವ ನಾನು ಈ ದೇಶದ ಪ್ರಧಾನಿಯಾಗಿರುವುದು ಕಾಣಿಸುತ್ತಿಲ್ಲವೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.
ಈ ಹೇಳಿಕೆಗೆ ಒಡಿಶಾದ ಜಾರಸ್ಗುಡದಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೂರನೇ ಮತ್ತು ಮುಕ್ತಾಯದ ದಿನದಂದು ಪ್ರತಿಕ್ರಿಯಿಸಿರುವ ವಯನಾಡ್ನ ಸಂಸದ ರಾಹುಲ್ ಗಾಂಧಿ, “ಮೋದಿ ಅವರು ಜನರಲ್ ಕ್ಯಾಟಗರಿಗೆ ಸೇರಿದ ಕುಟುಂಬದಲ್ಲಿ ಜನಿಸಿದ್ದರು. ಆದರೆ ಮೋದಿ, ತಾವು ಒಬಿಸಿ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
#WATCH | Congress MP Rahul Gandhi says, “PM Modi was not born in the OBC category. He was born Teli caste in Gujarat. The community was given the tag of OBC in the year 2000 by the BJP. He was born in the General caste…He will not allow caste census to be conducted in his… pic.twitter.com/AOynLpEZkK
— ANI (@ANI) February 8, 2024
“ಪ್ರಧಾನಿ ನರೇಂದ್ರ ಮೋದಿ ಅವರು ಇತರೆ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿಲ್ಲ. ಮೋದಿ, 2000ರಲ್ಲಿ ಗುಜರಾತ್ನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಬಿಸಿ ಪಟ್ಟಿಗೆ ಸೇರಿಸಲ್ಪಟ್ಟ ತೇಲಿ ಜಾತಿಯ ಕುಟುಂಬದಲ್ಲಿ ಜನಿಸಿದವರು. ಆದ್ದರಿಂದ ಮೋದಿ ಹುಟ್ಟಿನಿಂದ ಒಬಿಸಿ ಅಲ್ಲ” ಎಂದು ರಾಹುಲ್ ಗಾಂಧಿ ತಿಳಿಸಿದರು.
“ಪ್ರಧಾನಿ ಮೋದಿ ಒಬಿಸಿಗಳೊಂದಿಗೆ ಕೈಕುಲುಕುವುದಿಲ್ಲ. ರೈತರ ಕೈ ಕುಲುಕುವುದಿಲ್ಲ. ಬದಲಿಗೆ ಕೋಟ್ಯಾಧಿಪತಿ ಅದಾನಿಯವರನ್ನು ಅಪ್ಪಿಕೊಳ್ಳುತ್ತಾರೆ” ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
“ನಾನು ಜಾತಿ ಗಣತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದಾಗ ಪ್ರಧಾನಿ ಮೋದಿಯವರು ದೇಶದಲ್ಲಿ ಕೇವಲ ಎರಡು ಜಾತಿಗಳಿವೆ. ಶ್ರೀಮಂತ ಮತ್ತು ಬಡವ ಎಂದು ಹೇಳುತ್ತಾರೆ. ಎರಡು ಜಾತಿಗಳಿದ್ದರೆ ನೀವು ಯಾರು? ನೀವು ಬಡವರಲ್ಲ! ಕೋಟಿ ಬೆಲೆಬಾಳುವ ಸೂಟ್ ಧರಿಸುತ್ತೀರಿ. ದಿನಕ್ಕೆ ಹಲವಾರು ಬಾರಿ ಬಟ್ಟೆ ಬದಲಿಸಿ, ನಂತರ ನಾನು ಒಬಿಸಿ ವರ್ಗದ ವ್ಯಕ್ತಿ ಎಂದು ಸುಳ್ಳು ಹೇಳುತ್ತೀರಿ” ಎಂದು ರಾಹುಲ್ ಗಾಂಧಿ ಜರೆದಿದ್ದಾರೆ.
ಇದನ್ನು ಓದಿದ್ದೀರಾ? ಶ್ವೇತಪತ್ರಕ್ಕೆ ಕಾಳಪತ್ರ | ಹತ್ತು ವರ್ಷದಲ್ಲಿ 411 ಶಾಸಕರ ಖರೀದಿ ಬಿಜೆಪಿಯ ಸಾಧನೆ: ಖರ್ಗೆ
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಇಂದು ಇಲ್ಲಿನ ಹಳೆ ಬಸ್ ನಿಲ್ದಾಣದಿಂದ ಯಾತ್ರೆಯನ್ನು ಪುನರಾರಂಭಿಸಿದರು. ಅವರ ಜೊತೆ ಎಐಸಿಸಿ ನಾಯಕ ಅಜೋಯ್ ಕುಮಾರ್ ಮತ್ತು ಒಪಿಸಿಸಿ ಅಧ್ಯಕ್ಷ ಶರತ್ ಪಟ್ಟನಾಯಕ್ ಇದ್ದರು. ಯಾತ್ರೆಯು ಇಂದು ಸಂಜೆ ಒಡಿಶಾದಿಂದ ಛತ್ತೀಸ್ಗಢವನ್ನು ಪ್ರವೇಶಿಸಲಿದೆ.





