ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶ, ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡುವ ಗುರಿಯನ್ನು ಸಾಧಿಸಲು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (FKCCI), ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ 2024ರ ಜೂನ್ 15, 16 ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 15 ಮತ್ತು 16 ರಂದು ಬೆಂಗಳೂರಿನ ಆರಮನೆ ಮೈದಾನದ ಪ್ರಿನ್ಸೆಸ್ ಲೈನ್ನ ಗೇಟ್ ನಂ. 9ರಲ್ಲಿ ದಕ್ಷಿಣ ಭಾರತ ಉತ್ಸವ-2024 ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶಗಳು ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡುವ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಿದೆ” ಎಂದು ತಿಳಿಸಿದರು.
“ಕ್ರಿಯಾತ್ಮಕ ಪ್ರವಾಸೋದ್ಯಮ ಉದ್ಯಮದೊಳಗೆ ಪಾಲುದಾರರನ್ನು ತೊಡಗಿಸಿಕೊಳ್ಳಲು ಮತ್ತು ಸಬಲೀಕರಣಗೊಳಿಸಲು ನಿಖರವಾಗಿ ವಿನ್ಯಾಸಗೊಳಿಸಲಾದ ದಕ್ಷಿಣ ಭಾರತ ಉತ್ಸವವು ಎರಡು ದಿನಗಳ ಕಾರ್ಯಕ್ರಮವಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆದಾರರ ಸಮಾವೇಶ, ದಕ್ಷಿಣ ರಾಜ್ಯಗಳ ಶ್ರೀಮಂತ ಸಂಸ್ಕೃತಿ, ಪಾಕಪದ್ಧತಿ ಮತ್ತು ಪ್ರವಾಸೋದ್ಯಮ ಕೊಡುಗೆಗಳನ್ನು ವಿಶ್ಲೇಷಿಸಿ ತೋರಿಸುವ ಪ್ರದರ್ಶನ, ಸಮ್ಮೇಳನಗಳು ಮತ್ತು ಬಿ 2 ಬಿ. ಬಿ 2 ಜಿ ಮತ್ತು ಬಿ 2 ಸಿ ಸಂವಹನಗಳ ಮೂಲಕ ಸಂಪರ್ಕ ಅವಕಾಶಗಳು ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡಿದೆ” ಎಂದು ಸಚಿವ ಡಾ. ಎಚ್.ಕೆ.ಪಾಟೀಲ್ ತಿಳಿಸಿದರು.
“ಪ್ರವಾಸೋದ್ಯಮವನ್ನು ಉತ್ತೇಜಿಸುವುದು. ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದು ಮತ್ತು ವ್ಯಾಪಾರ ಅವಕಾಶಗಳನ್ನು ಸುಗಮಗೊಳಿಸುವುದು. ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭೌಗೋಳಿಕ ವೈವಿಧ್ಯತೆಯನ್ನು ಪದರ್ಶಿಸುವುದು. ದಕ್ಷಿಣ ಭಾರತದ ವಿಶಿಷ್ಟ ಕೊಡುಗೆಗಳನ್ನು ಅನ್ವೇಷಿಸಲು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವುದು ಹಾಗೂ ಪ್ರೋತ್ಸಾಹಿಸುವುದು. ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪಾಲುದಾರರಿಗೆ ನೆಟ್ವರ್ಕಿಂಗ್ ಸಹಯೋಗ ಮತ್ತು ಪಾಲುದಾರಿಕೆಗಳನ್ನು ರೂಪಿಸಲು ವೇದಿಕೆಯನ್ನು ಒದಗಿಸುವುದು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಉದ್ಯಮಗಳಿಗೆ ಅವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶ” ಎಂದು ತಿಳಿಸಿದರು.
“ದಕ್ಷಿಣ ಭಾರತ ಉತ್ಸವದ ಸಲುವಾಗಿ ಬಂಡವಾಳ ಹೂಡಿಕೆ ಆಕರ್ಷಿಸಲು ನಮ್ಮ ರಾಜ್ಯದ ಚಿಕ್ಕಮಗಳೂರು, ಮೈಸೂರು, ಉಡುಪಿ ಜಿಲ್ಲೆಗಳಲ್ಲಿ ಹಾಗೂ ನೆರೆಯ ರಾಜ್ಯದ ಹೈದರಾಬಾದ್, ಚೆನ್ನೈ, ವಿಜಯವಾಡ ಮತ್ತು ಕೊಚ್ಚಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗಯೊಂದಿಗೆ ಅನೇಕ ರೋಡ್ ಶೋಗಳನ್ನು ನಡೆಸಿ ಅಲ್ಲಿನ ಹೂಡಿಕೆದಾರರೊಂದಿಗೆ ಸಭೆ ನಡೆಸಿದ್ದೇವೆ. ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ವಿಶೇಷವಾಗಿ ಎಸ್. ಎಂ. ಇ. ಗಳ ಅನೇಕ ಪಾಲುದಾರರು ಹೂಡಿಕೆ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ರೋಡ್ ಶೋಗಳ ಸಮಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿ ಅವರಿಂದ ಆಸಕ್ತಿ ಪತ್ರವನ್ನು ಸ್ವೀಕರಿಸಲಾಗಿದೆ. ಈಗಾಗಲೇ ಸುಮಾರು ರೂ. 500 ಕೋಟಿ ರೂಪಾಯಿಗಳು “ಹೂಡಿಕೆ ಆಸಕ್ತಿ ಪತ್ರ”ವನ್ನು ಸ್ವೀಕರಿಸಲಾಗಿದೆ. ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಈ ಸಮಾವೇಶದ ದಿನಗಳಲ್ಲಿ ಇನ್ನೂ ರೂ.500 ಕೋಟಿ ಹೂಡಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಸಚಿವ ಡಾ. ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ವಯನಾಡ್-ರಾಯ್ಬರೇಲಿ: ಯಾವ ಕ್ಷೇತ್ರ ಉಳಿಸಿಕೊಳ್ಳಲಿ? ‘ಧರ್ಮಸಂಕಟ’ದಲ್ಲಿ ರಾಹುಲ್ ಗಾಂಧಿ
“ಎಫ್ಕೆಸಿಸಿಐ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಡುವಿನ ಈ ಸಹಯೋಗವು ಆರ್ಥಿಕ ಸಮೃದ್ಧಿ ಮತ್ತು ಸಾಮಾಜಿಕ ಪ್ರಗತಿಯ ಚಾಲಕನಾಗಿ ಪ್ರವಾಸೋದ್ಯಮದ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಹಂಚಿಕೆಯ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಕಾರ್ಯತಂತ್ರದ ಪಾಲುದಾರಿಕೆಗಳು ಮತ್ತು ನವೀನ ಉಪಕ್ರಮಗಳ ಮೂಲಕ, ದಕ್ಷಿಣ ಭಾರತ ಉತ್ಸವವು ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು. ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ದಕ್ಷಿಣ ಭಾರತವನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಮುಂಚೂಣಿಯಲ್ಲಿಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಸಚಿವ ಪಾಟೀಲ್ ತಿಳಿಸಿದರು.





