ಕಳೆದ ಮೇ 15 ರಂದು ಬೆಂಗಳೂರು ದಕ್ಷಿಣ ಡಿಸಿಪಿ ವ್ಯಾಪ್ತಿಯ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ದ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಪ್ರಬುದ್ಧ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳು ಈ ಮನವಿಯನ್ನು ಪುರಸ್ಕರಿಸಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯ: ತಾಯಿ ಆರೋಪ
ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಬುದ್ಧ ತಾಯಿ ಕೆ.ಆರ್.ಸೌಮ್ಯ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನ ಬಿ.ಎಂ.ಎಸ್. ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ಮಾಡುತ್ತಿದ್ದ ಅತ್ಯದ್ಭುತ ವಾಕ್ಸಟು ಹಾಗು ಕ್ರಿಯಾಶೀಲೆಯಾದ ನನ್ನ ಮಗಳು ಪ್ರಬುದ್ಧಳನ್ನು 2024ರ ಮೇ 15ರ ಸಾಯಂಕಾಲ ನನ್ನ ಮನೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ಮೊದಲ ದಿನದಿಂದಲೂ ಸುಬ್ರಮಣ್ಯಪುರ ಪೋಲೀಸ್ ಠಾಣೆಯ ತನಿಖಾಧಿಕಾರಿಗಳು ಮತ್ತು ಅವರ ತಂಡ ಸಂಶಯಾಸ್ಪದವಾಗಿ ವರ್ತಿಸುತ್ತಾ ನನ್ನ ಮನಸ್ಸಿಗೆ ಬಹು ಘಾತ ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಪದೇ ಪದೇ ಹೇಳಿದರೂ ಕೇಳಿಸಿಕೊಳ್ಳದ ತನಿಖಾ ತಂಡ ಮೊದಲ ಮೂರ್ನಾಲ್ಕು ದಿನವು ಇದನ್ನು ಆತ್ಮಹತ್ಯೆ ಎಂದೇ ಬಿಂಬಿಸುವ ಪ್ರಯತ್ನ ಮಾಡಿ, ಕೊಲೆಗಡುಕ ಮತ್ತು ಕೊಲೆಗಡುಕನಿಗೆ ಎಲ್ಲ ರೀತಿಯ ಸಹಾಯ ಮತ್ತು ಸಹಾಯ ಮಾಡಿ, ಕೊಲೆಯ ಸಂಗತಿಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ ಕೊಲೆಗಡುಕನ ತಂದೆ ತಾಯಿಯರನ್ನೂ ರಕ್ಷಿಸುವ ದುರುದ್ದೇಶದ ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.
ಮಗಳನ್ನು ಕಳೆದುಕೊಂಡ ನೋವಿನಲ್ಲೂ ನಾನು ನ್ಯಾಯಕ್ಕಾಗಿ ಶ್ರಮವಹಿಸಿ ಆ CCTVಗಳ ಪೂಟೇಟ್ಗಳ ಕುರಿತು ಗಮನಿಸಲು ಒತ್ತಾಯಿಸಿದಾಗಲೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನಗೆ ಗೊತ್ತಿರುವ ಸತ್ಯವನ್ನು ಕೇಳಿಸಿಕೊಳ್ಳಲೂ ನಿರಾಕರಿಸುತ್ತಿದ್ದಾರೆ. ಕೊಲೆಗಾರನ ತಂದೆ ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ಬಾರ್ ನಡೆಸುತ್ತಿದ್ದು ಪೋಲೀಸರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರೆ. ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕಾಟಾಚಾರಕ್ಕೆ ಮಹಜರು ನಡೆಸಿದ್ದಾರೆ. ಜೆಜೆಬಿಯಲ್ಲಿ ವಕೀಲರಿಗೆ ಯಾವುದೇ ಮಾಹಿತಿ ಒದಗಿಸದೇ, ಆಪಾದಿತನು ಹತ್ತೇ ದಿನಕ್ಕೆ ಜಾಮೀನು ಪಡೆದು ನಿಶ್ಚಿಂತನಾಗಿ ಓಡಾಡಿಕೊಂಡಿದ್ದಾನೆ.
ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದ ನನಗೆ ಈಗ ಜೀವಭಯವೂ ಉಂಟಾಗಿದೆ. ನನ್ನ ವಯಸ್ಸಾದ ತಾಯಿ ಮತ್ತು ಮಗನ ಕುರಿತೂ ಆತಂಕವಾಗಿದೆ. ಪೋಲೀಸರ ತನಿಖೆಯ ಕುರಿತ ನನ್ನ ಆತಂಕಗಳು ಹಾಗೂ ಸಂದೇಹಗಳಿದೆ. ಪ್ರಬುದ್ಧ ಹತ್ಯೆಯನ್ನು ಸಿ.ಐ.ಡಿ.ಗೆ ವಹಿಸಿ ಅಪರಾಧಿ ಮತ್ತು ಅವನಿಗೆ ಬೆಂಬಲ ನೀಡಿದವರಿಗೆ ತಕ್ಕ ಶಿಕ್ಷೆ ವಿಧಿಸಲು ನೆರವಾಗಿ ಎಂದು ಮನವಿಯಲ್ಲಿ ಪ್ರಬುದ್ಧ ತಾಯಿ ಕೆ.ಆರ್.ಸೌಮ್ಯ ತಿಳಿಸಿದ್ದಾರೆ.
‘ಹಣದ ವಿಚಾರಕ್ಕೆ ಕೃತ್ಯ’ ಎಂದು ತಿಳಿಸಿದ್ದ ಪೊಲೀಸರು
ಹತ್ಯೆಯಾದ ಪ್ರಬುದ್ದ ಅವರ ಸಹೋದರ ಹಾಗೂ ಆರೋಪಿ ಸ್ನೇಹಿತರಾಗಿದ್ದು, ಅದೇ ಸಲುಗೆಯಲ್ಲಿ ಆರೋಪಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಆಟವಾಡುವಾಗ ತನ್ನ ಇನ್ನೊಬ್ಬ ಸ್ನೇಹಿತನ ಕನ್ನಡಕ ಮುರಿದಿದ್ದ ಆರೋಪಿಗೆ ಅದನ್ನು ಸರಿ ಮಾಡಿಸಿಕೊಡಲು ಹಣದ ಅವಶ್ಯಕತೆಯಿತ್ತು. ಕೃತ್ಯಕ್ಕಿಂತ ಕೆಲವು ದಿನಗಳ ಹಿಂದಷ್ಟೇ ಪ್ರಬುದ್ಧಾಳ ಮನೆಗೆ ಬಂದಿದ್ದ ಆತ ಇದಕ್ಕಾಗಿಯೇ ಆಕೆಯ ಪರ್ಸ್ನಲ್ಲಿದ್ದ 2 ಸಾವಿರ ರೂ ಹಣ ಕಳ್ಳತನ ಮಾಡಿದ್ದ. ಈ ವಿಚಾರ ಆಕೆಗೆ ಗೊತ್ತಾಗಿದ್ದರಿಂದ ವ್ಯವಸ್ಥಿತವಾಗಿ ಕೊಲೆಗೈದು, ಆತ್ಮಹತ್ಯೆ ಎಂಬಂಂತೆ ಬಿಂಬಿಸಿದ್ದ ಎಂದು ತನಿಖೆ ನಡೆಸಿದ್ದ ಪೊಲೀಸರು ತಿಳಿಸಿದ್ದರು.





