ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಚಿಕ್ಕಪೇಟೆಯ ನಗರ್ತಪೇಟೆಯಲ್ಲಿ ಲೌಡ್ ಸ್ಪೀಕರ್ ಹಾಕಿದ್ದಕ್ಕೆ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಮೇಲೆ ಹಲ್ಲೆ ಮಾಡಿರುವುದನ್ನು ಹಿಂದೂ ಹುಡುಗನ ಮೇಲೆ ಹಲ್ಲೆ ನಡೆದಿದೆ ಎಂದು ಬಿಜೆಪಿ ಅದರ ಲಾಭ ಪಡಿಯಲು ಮುಂದಾಗಿದೆ.
ಇದಕ್ಕೆ ಪೊಲೀಸರಲ್ಲದೆ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಕೂಡ ಸ್ಪಷ್ಟನೆ ನೀಡಿದ್ದು, ಇದು ಹನುಮಾನ್ ಚಾಲಿಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಸಂಬಂಧಿಸಿದ ಜಗಳ ಅಲ್ಲವೇ ಅಲ್ಲ, ಚುನಾವಣೆ ಸಮಯದಲ್ಲಿ ಆಗಿರುವುದರಿಂದ ಇದು ಇಷ್ಟು ದೊಡ್ಡ ವಿಷಯವಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ಚಾನೆಲ್ವೊಂದರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿರುವ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್, “ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಅಂಗಡಿಯನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಇದು ನನ್ನ ಕ್ಷೇತ್ರವಾಗಿದ್ದರಿಂದ ಎಲ್ಲ ಮಾಹಿತಿ ನನಗೆ ಗೊತ್ತಿದೆ. ಇದನ್ನು ದೊಡ್ಡದಾಗಿಸುವ ಅವಶ್ಯತಕತೆ ಇರಲಿಲ್ಲ. ಚುನಾವಣೆ ಸಮಯದಲ್ಲಿ ಆಗಿರುವುದರಿಂದ ಇದು ಇಷ್ಟು ದೊಡ್ಡ ವಿಷಯವಾಗಿದೆ” ಎಂದು ಹೇಳಿದ್ದಾರೆ. ಈ ಹೇಳಿಕೆಯ ವಿಡಿಯೋವನ್ನು ಕಾಂಗ್ರೆಸ್ ಐಟಿ ಸೆಲ್ ಕೂಡ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನಗರ್ತಪೇಟೆಯ ಶಾಸಕರು ಬಿಜೆಪಿಯವರೇ,
ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು @BJP4Karnataka ಪ್ರಾಪಗಾಂಡಾಗಳಿಗೆ ತಪರಾಕಿ ನೀಡಿದ್ದಾರೆ,
ಇದು ಬಿಜೆಪಿಯವರು ಚುನಾವಣೆಗಾಗಿ ಹಚ್ಚಿದ ಕೋಮು ಬೆಂಕಿ ಎನ್ನುವುದಕ್ಕೆ ಪುಷ್ಟಿ ನೀಡಿದ್ದಾರೆ.@Tejasvi_Surya ಎಂಬ ಅವಿವೇಕಿ ಶಿಶುವಿಗೆ ಈ ಗಲಾಟೆಯ ವಿಷಯದಲ್ಲಿ… pic.twitter.com/xH0XEpsnNO
— Karnataka Congress (@INCKarnataka) March 20, 2024
“ಪಾನ್ ಅಂಗಡಿ ಇಟ್ಟುಕೊಂಡವನಿಗೆ ಸುಮ್ಮನೆ ಹೊಡೆದಿದ್ದಾರೆ. ಇದು ಅವರವರ ವೈಯಕ್ತಿಕ ಜಗಳ. ಈ ಚುನಾವಣೆ ಸಮಯದಲ್ಲಿ ಇದನ್ನು ದೊಡ್ಡ ವಿಷಯ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. ಅನ್ಯಕೋಮಿನ ಜಗಳ ಎಂದು ನಾನು ಯಾವತ್ತೂ ಹೇಳಲ್ಲ, ನಾನು ಸೆಕ್ಯೂಲರ್ ವ್ಯಕ್ತಿ. ಎಲ್ಲ ಜನಾಂಗದವರು ಚೆನ್ನಾಗಿ ಇರಬೇಕು ಎಂದು ಹೇಳುವವನು” ಎಂದು ಹೇಳಿದ್ದಾರೆ.
“ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ. ಕಾಂಗ್ರೆಸ್ನವರು ಪ್ರತಿಭಟನೆ ಮಾಡಬಾರದಿತ್ತು ಎಂದು ಆರೋಪ ಮಾಡುತ್ತಿದ್ದರೆ. ನಮ್ಮ ಬಿಜೆಪಿಯವರು ಚುನಾವಣೆ ಸಮಯದಲ್ಲಿ ಇದನ್ನು ಅಸ್ತ್ರ ಮಾಡಿಕೊಂಡಿದ್ದಾರೆ ಅಷ್ಟೇ” ಎಂದು ನಗುನಗುತ್ತಾ ಸುದ್ದಿವಾಹಿನಿ ಜೊತೆಗೆ ಹೇಳಿದ್ದಾರೆ.
“ಬೆಳಗ್ಗೆ ತೇಜಸ್ವಿ ಸೂರ್ಯ ಕಾಲ್ ಮಾಡಿದಾಗಲು ಕೂಡ ನಾನು ಅವರಿಗೆ ಹೇಳಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನು ದೊಡ್ಡದು ಮಾಡಬೇಡಿ. ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದೇನೆ. ಅದರಂತೆ ಈಗ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಭಾನುವಾರ ರಾತ್ರಿ 10.30ಕ್ಕೆ ಕಬ್ಬನ್ಪೇಟೆ ನಿವಾಸಿ ಮುಖೇಶ್ ಅವರು, ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್, ತರುಣ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸರು ಐವರನ್ನು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.
ಈ ಹಿಂದೆಯೂ ಸಂಘಪರಿವಾರದ ನಡೆಗೆ ವಿರೋಧ ಸೂಚಿಸಿದ್ದ ಬಿಜೆಪಿ ಶಾಸಕ ಉದಯ್ ಗರುಡಾಚಾರ್!
ಈ ಹಿಂದೆ ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ದೇವಸ್ಥಾನವೊಂದರ ವಠಾರದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬೋರ್ಡ್ ಅನ್ನು ಹಾಕಲಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಬಿಜೆಪಿ ಶಾಸಕ ಉದಯ್ ಗರುಡಾಚಾರ್, ಆ ಬೋರ್ಡ್ ಅನ್ನು ಖುದ್ದು ತಾವೇ ತೆಗೆಸಿದ್ದಲ್ಲದೇ, ಎಲ್ಲ ಧರ್ಮದವರಿಗೂ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದ್ದರು.





