ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಸಚಿವ ಶರಣಬಸಪ್ಪ ದರ್ಶನಾಪುರ, “ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆಯಾದಾಗ ಬಿಜೆಪಿ ಮತ್ತು ಜೆಡಿಎಸ್ನವರು ಕೊಲೆಗೈದಿದ್ದ ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದರು. ಈಗ ಬಿಜೆಪಿ, ಜೆಡಿಎಸ್ನವರು ಎಲ್ಲಿದ್ದಾರೆ? ಪ್ರಜ್ವಲ್ನನ್ನು ಎನ್ಕೌಂಟರ್ ಮಾಡಿ ಅಂತ ಯಾಕೆ ಹೇಳುತ್ತಿಲ್ಲ?” ಎಂದು ಕೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜತೆ ರಾಸಲೀಲೆ ನಡೆಸಿದ ವಿಡಿಯೋ ಇದ್ದ ಪೆನ್ಡ್ರೈವ್ ಬಿಡುಗಡೆಯ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ, “ಪ್ರಜ್ವಲ್ ರೇವಣ್ಣ ಅವರು ಡಿಕೆ ಶಿವಕುಮಾರ್ ಮಾತು ಕೇಳಿ ಸೆಕ್ಸ್ ವಿಡಿಯೋ ಮಾಡಿಕೊಂಡ್ರಾ? ಅಥವಾ ಡಿಕೆ ಶಿವಕುಮಾರ್ ಏನು ಎಲ್ಲ ಹೆಣ್ಣು ಮಕ್ಕಳ ಸೆಕ್ಸ್ ವಿಡಿಯೋ ಮಾಡಿಕೊಳ್ಳು ಅಂತ ಹೇಳಿದ್ರಾ? ಅಥವಾ ಡಿ ಕೆ ಶಿವಕುಮಾರ್ ಅವರೇ ವಿಡಿಯೋ ಮಾಡಿದ್ರಾ?” ಎಂದು ಜೆಡಿಎಸ್ – ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
“ಪ್ರಜ್ವಲ್ ರೇವಣ್ಣ ವಿಡಿಯೋ ರೆಕಾರ್ಡ್ ಮಾಡಿಕೊಂಡು ಈಗ ಬೇರೆಯವರ ಮೇಲೆ ಹಾಕುತ್ತಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡಿದವರು ಯಾರು? ಎಷ್ಟು ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ದಾರೆ? ನೇಹಾ ಹಿರೇಮಠ ಕೊಲೆಯಾದಾಗ ಬಿಜೆಪಿ ಮತ್ತು ಜೆಡಿಎಸ್ನವರು ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದರು. ಈಗ ಬಿಜೆಪಿ, ಜೆಡಿಎಸ್ನವರು ಎಲ್ಲಿದ್ದಾರೆ? ಪ್ರಜ್ವಲ್ನನ್ನು ಎನ್ಕೌಂಟರ್ ಮಾಡಿ ಅಂತ ಯಾಕೆ ಹೇಳುತ್ತಿಲ್ಲ? ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯನಾ? ಎಂದು ಸಚಿವ ದರ್ಶನಾಪುರ ಕೇಳಿದರು.
ಇದನ್ನು ಓದಿದ್ದೀರಾ? ನಾಲ್ಕು ಹಂತಗಳ ಚುನಾವಣೆಯಲ್ಲೂ ‘ಇಂಡಿಯಾ’ ಒಕ್ಕೂಟ ಮುಂದಿದೆ: ಖರ್ಗೆ
ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಆತ ಗಂಡಸಾಗಿದ್ದರೇ ರಾಜ್ಯಕ್ಕೆ ಬಂದು, ನಾಲ್ಕು ಜನ ಶಾಸಕರನ್ನು ಕರೆದುಕೊಂಡು ಹೋಗಲಿ. ಮಹಾರಾಷ್ಟ್ರದಲ್ಲಿ ಅಲ್ಲಿ ಏನು ಕಡಿಯಲು ಆಗುತ್ತಿಲ್ಲ. ಆತ ನಮ್ಮ ರಾಜ್ಯದಲ್ಲಿ ಏನು ಕಡೀತಾನೆ. ಮಹಾರಾಷ್ಟ್ರದಲ್ಲಿ ಮೊದಲು ತಮ್ಮ ಸರ್ಕಾರ ಉಳಿಸಿಕೊಳ್ಳಲಿ. ಅವರ ಸರ್ಕಾರವೇ ಅಲುಗಾಡುತ್ತಿದೆ. ತನಗೆ ಬೆಂಬಲ ಕೊಟ್ಟಿರುವ ಶಾಸಕರ ಕೈಕಾಲು ಹಿಡಿಯುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.





