ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ಕೊನೆಯವರೆಗೂ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ಕೆಕೆಆರ್ನ ವೇಗಿ ಹರ್ಷಿತ್ ರಾಣಾ ನಡೆದುಕೊಂಡಿದ್ದ ಅನುಚಿತ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಣಾಗೆ ದಂಡ ವಿಧಿಸಲಾಗಿದೆ.
ಐಪಿಎಲ್ನ ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 4 ರನ್ಗಳ ರೋಚಕ ಜಯ ಸಾಧಿಸಿತ್ತು. ಈ ರೋಚಕ ಗೆಲುವಿನ ರೂವಾರಿ, ಯುವ ವೇಗಿ ಹರ್ಷಿತ್ ರಾಣಾಗೆ ಪಂದ್ಯದ ಶುಲ್ಕದ ಶೇ.60 ರಷ್ಟು ದಂಡ ವಿಧಿಸಲಾಗಿದೆ.
ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಹರ್ಷಿತ್ ರಾಣಾ, ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ್ದರು. ಎಸ್ಆರ್ಹೆಚ್ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದು ಫ್ಲೈಯಿಂಗ್ ಕಿಸ್ ನೀಡಿ ಬೀಳ್ಕೊಟ್ಟಿದ್ದರು.
Sunil Gavaskar " Harshit Rana should not have given that send off to mayank. Did the Mayank Agarwal do anything to him when he was hitting him for sixes? Celebrate with your teammates but no need for such antics for the opposition"pic.twitter.com/UfoNfENNG6
— Sujeet Suman (@sujeetsuman1991) March 24, 2024
ಹಾಗೆಯೇ ಕೊನೆಯ ಓವರ್ನಲ್ಲಿ ಹೆನ್ರಿ ಕ್ಲಾಸೆನ್ ವಿಕೆಟ್ ಕಬಳಿಸಿದ ಬಳಿಕ ಪೆವಿಲಿಯನ್ಗೆ ದಾಟುವಂತೆ ಕೈ ಸನ್ನೆ ಮಾಡಿದ್ದರು. ಹೀಗೆ ಎರಡು ಬಾರಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಮೇಲೆ ಶೇಕಡಾ 60ರಷ್ಟು ದಂಡ ವಿಧಿಸಲಾಗಿದೆ.
ಈ ಪಂದ್ಯದಲ್ಲಿ 4 ಓವರ್ಗಳನ್ನು ಬೌಲಿಂಗ್ ಮಾಡಿದ್ದ ಹರ್ಷಿತ್ ಒಟ್ಟು 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ ಓವರ್ನಲ್ಲಿ ಅದ್ಭುತ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು.

ಕೊನೆಯ ಓವರ್ನಲ್ಲಿ ಎಸ್ಆರ್ಹೆಚ್ ತಂಡಕ್ಕೆ 13 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಹರ್ಷಿತ್ ರಾಣಾ ಅವರ ಮೊದಲ ಎಸೆತಕ್ಕೆ ಹೆನ್ರಿಕ್ ಕ್ಲಾಸೆನ್ ಸಿಕ್ಸ್ ಸಿಡಿಸಿದರು. ಇದಾದ ಬಳಿಕ 5 ಎಸೆತಗಳಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಕೇವಲ 2 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಈ ಮೂಲಕ ಕೆಕೆಆರ್ ತಂಡಕ್ಕೆ 4 ರನ್ಗಳ ರೋಚಕ ಜಯ ತಂದುಕೊಡುವಲ್ಲಿ ಹರ್ಷಿತ್ ರಾಣಾ ಯಶಸ್ವಿಯಾಗಿದ್ದರು. ಇದೀಗ ಈ ಯಶಸ್ಸಿನ ಬೆನ್ನಲ್ಲೇ ಯುವ ವೇಗಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.
ಹರ್ಷಿತ್ ರಾಣಾ ನಡೆದುಕೊಂಡ ರೀತಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಆಕ್ರೋಶ ಹೊರಹಾಕಿದ್ದರು. “ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದ ಬಳಿಕ ಹರ್ಷಿತ್ ರಾಣಾ ನಡೆದುಕೊಂಡ ರೀತಿ ಒಳ್ಳೆಯ ಬೆಳವಣಿಗೆಯಲ್ಲ. ಇದು ಮುಂಬರುವ ಯುವ ಆಟಗಾರರಿಗೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ” ಎಂದು ತಿಳಿಸಿದ್ದರು.





