ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕಾದರೆ ಮೂಲದಲ್ಲೇ ಕಸ ವಿಂಗಡಣೆಯಾಗಬೇಕು. ಆ ನಿಟ್ಟಿನಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಬೇಕೆಂದು ಜಾಗೃತಿ ಪ್ರಚಾರ ನಡೆಸುತ್ತಿದ್ದರೂ ಅದು ನಿರೀಕ್ಷಿತ ಫಲ ನೀಡುತ್ತಿಲ್ಲ. ಅದಕ್ಕಾಗಿಯೇ ಈಗ ಬಂದಿದೆ ‘ಎಐ ಆಧಾರಿತ ಕಸದ ಬುಟ್ಟಿ’.
ತುರ್ತಾಗಿ ಗ್ರಾಫಿಕ್ ಡಿಸೈನ್ ಮಾಡಬೇಕಿದೆ. ಇದಕ್ಕೆ ಗ್ರಾಫಿಕ್ ಡಿಸೈನರ್ ಅನ್ನು ಇನ್ನು ಕಾಯಬೇಕಾದ ಅಗತ್ಯವೇ ಇಲ್ಲ. ಕೇವಲ ಎಐ ನೋಟ್ ಬುಕ್ನಲ್ಲಿ ಬರೆದರೆ ಸಾಕು, ಒಂದೆರಡು ನಿಮಿಷಗಳಲ್ಲಿ ನೀವು ಬಯಸಿದ ಗ್ರಾಫಿಕ್ ಡಿಸೈನ್ ತಯಾರಾಗಿ ಬಿಡುತ್ತದೆ. ಗಂಟೆಗಳೊಳಗೆ ಮೆಟಲ್ 3ಡಿ ಪ್ರಿಂಟಿಂಗ್, ವಯಸ್ಸಾದವರು, ವಿಶೇಷ ಚೇತನರಿಗೆ ಓಡಾಡಲು ‘ಕಂಫರ್ಟ್’ ಇರುವ ಎಲೆಕ್ಟ್ರಿಕ್ ವಾಹನ, ರೋಬೊ ಡಾಗ್, ಕೃಷಿಕರು ತಮ್ಮ ಹೊಲಕ್ಕೆ ರಾಸಾಯನಿಕ ಸಿಂಪಡಿಸಲು ಅತ್ಯಾಧುನಿಕ ಡ್ರೋನ್….ಹೀಗೆ ಇವೆಲ್ಲವೂ ಕಾಣಸಿಕ್ಕಿದ್ದು ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ಟೆಕ್ ಸಮ್ಮಿಟ್ನಲ್ಲಿ.

ಬೆಂಗಳೂರಿನಲ್ಲಿ ನ.20ರವರೆಗೆ ನಡೆಯುತ್ತಿರುವ ಟೆಕ್ ಸಮ್ಮಿಟ್ನಲ್ಲಿ ಎಐ ತಂತ್ರಜ್ಞಾನ ಸೇರಿದಂತೆ ಹಲವು ತಂತ್ರಜ್ಞಾನಗಳ ಪ್ರದರ್ಶನ ನಡೆಯುತ್ತಿದೆ. ಭಾರತ, ಆಸ್ಟ್ರೇಲಿಯಾ, ರಷ್ಯಾ, ಉರುಗ್ವೆ, ರಷ್ಯಾ, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್, ಬೆಲ್ಜಿಯಂ, ಫಿನ್ಲ್ಯಾಂಡ್, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಜನರಿಗೆ ಪ್ರದರ್ಶಿಸುತ್ತಾ, ಪರಿಚಯಿಸುತ್ತಿದ್ದಾರೆ.
ReNOTEAI ಎಂಬ ಎಐ ನೋಟ್ ಬುಕ್
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಆಂಧ್ರಪ್ರದೇಶದ ಸುಮನ್ ಬಾಲಬೊಮ್ಮು ಅವರೇ ಸ್ಥಾಪಿಸಿರುವ ReNOTEAI ಎಂಬ ಎಐ ನೋಟ್ ಬುಕ್ ಟೆಕ್ ಸಮ್ಮಿಟ್ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ReNote AI ಸ್ಮಾರ್ಟ್ ನೋಟ್ಬುಕ್ ಆಗಿದ್ದು, ಕೈಬರಹದ ಮೂಲಕ ಬರೆಯುವ ಎಲ್ಲ ವಿಷಯವನ್ನು ಕೂಡಲೇ ಹುಡುಕಲು, ಅನುವಾದಿಸಲು ನೆರವಾಗುತ್ತದೆ. ಜೊತೆಗೆ, ಮರುಬಳಕೆ ಮಾಡಬಹುದಾದ ನೋಟ್ಬುಕ್ ಕೂಡ ಇದರಲ್ಲಿದೆ. ಅಲ್ಲದೇ, ಕೈಯ್ಯಲ್ಲಿ ಬರೆದ ಪಠ್ಯವನ್ನು ಡಿಜಿಟಲ್ ಪಠ್ಯವಾಗಿ ಪರಿವರ್ತಿಸುತ್ತದೆ. ಜೊತೆಗೆ ಪ್ರಶ್ನೆಗಳನ್ನು ಕೇಳಿದಲ್ಲಿ ಸುಲಲಿತವಾಗಿರುವ ಉತ್ತರವನ್ನು ReNote AI ಚಾಟ್ ಬೋಟ್ ಮೂಲಕ ಉತ್ತರವೂ ಕೂಡ ದೊರೆಯುತ್ತದೆ. ಈ ನೋಟ್ಬುಕ್ ನೀರಿನಲ್ಲಿ ಬಿದ್ದರೂ ಏನೂ ಆಗಲ್ಲ, ಸುದೀರ್ಘ ಬಾಳಿಕೆ ಬರುವಂತೆ ತಯಾರಿಸಲಾಗಿದೆ.

“2016ರಿಂದ ಈ ReNote AI ಸ್ಮಾರ್ಟ್ ನೋಟ್ಬುಕ್ ತಂತ್ರಜ್ಞಾನವನ್ನು ಕಂಡುಹಿಡಿದು ಮುಂದುವರಿಸಿಕೊಂಡು ಬಂದಿದ್ದೇನೆ. ಗೂಗಲ್ ಕೂಡ ನಮ್ಮ ಸಾಧನೆಯನ್ನು ಗುರುತಿಸಿದೆ. ಜಪಾನ್ನಲ್ಲಿ ನಡೆದ ಟೆಕ್ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆವು. ರೀನೋಟ್ ಎಐ ಆನ್ಲೈನ್ ಶಿಕ್ಷಣಕ್ಕೆ ತುಂಬಾ ಪ್ರಯೋಜನಕಾರಿ” ಎಂದು ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಸುಮನ್ ಬಾಲಬೊಮ್ಮು ತಿಳಿಸಿದರು.

ಜನರಲ್ ಏರೋನಾಟಿಕ್ಸ್ ಸಂಸ್ಥೆಯಿಂದ ಬಂದಿದ್ದ ರೋಸರ್ ಸ್ಯಾಮುವೆಲ್ ತಾವು ತಂದಿದ್ದ ಅತ್ಯಾಧುನಿಕ ಡ್ರೋನ್ ‘ಕೃಷಕ್ 2ಐ’ಯನ್ನು ಪ್ರದರ್ಶಿಸುತ್ತಾ, “ನಮ್ಮ ಸಂಸ್ಥೆಯು ಕೃಷಿ ಚಟುವಟಿಕೆಗಳಿಗೆ ಬಳಸುವ ಅತ್ಯಾಧುನಿಕ ಡ್ರೋನ್ ಕೃಷಕ್ 2ಐ ಅನ್ನು ಅಭಿವೃದ್ಧಿಪಡಿಸಿದೆ. ಇದು ಬ್ಯಾಟರಿ ಇರುವ ಡ್ರೋನ್. ಒಮ್ಮೆ ಬ್ಯಾಟರಿ ಚಾರ್ಚ್ ಮಾಡಿದರೆ ನಾಲ್ಕರಿಂದ ಐದು ಎಕರೆ ಪ್ರದೇಶದಲ್ಲಿ ಕೀಟನಾಶಕ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಪ್ರೇ ಟ್ಯಾಂಕ್ ಸಾಮರ್ಥ್ಯ ಹತ್ತು ಲೀಟರ್ ಇದ್ದು, ನೀರು, ಕೀಟನಾಶಕ ಸಿಂಪಡಣೆ, ಬೀಜ ಬಿತ್ತನೆಗೆ ಬಳಸಬಹುದು. ಕಾರ್ಯಾಚರಣೆಯ ವೇಳೆ ಏನಾದರೂ ಅಡ್ಡಿಯಾದರೆ ಅಟೊಮ್ಯಾಟಿಕ್ ಆಗಿ ಬಂದ್ ಆಗಿ ಬಿಡುತ್ತದೆ. ಅಂತಹ ತಂತ್ರಜ್ಞಾವನ್ನು ಅಳವಡಿಸಲಾಗಿದೆ. ಒಂದು ದಿನದಲ್ಲಿ 40ರಿಂದ 50 ಎಕರೆಯವರೆಗೂ ಬಳಸಬಹುದು. ಇದು ಐದು ಲಕ್ಷ ಮೊತ್ತದ ಡ್ರೋನ್. ಬಳಸಲು ಆಸಕ್ತಿ ಇರುವವರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದು” ಎಂದು ವಿವರಿಸಿದರು.
ಎಐ ಆಧಾರಿತ ಕಸದ ಬುಟ್ಟಿ
ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕಾದರೆ ಮೂಲದಲ್ಲೇ ಕಸ ವಿಂಗಡಣೆಯಾಗಬೇಕು. ಆ ನಿಟ್ಟಿನಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಬೇಕೆಂದು ಜಾಗೃತಿ ಪ್ರಚಾರ ನಡೆಸುತ್ತಿದ್ದರೂ ಅದು ನಿರೀಕ್ಷಿತ ಫಲ ನೀಡುತ್ತಿಲ್ಲ. ಅದಕ್ಕಾಗಿಯೇ ಈಗ ಬಂದಿದೆ ಎಐ ಆಧಾರಿತ ಕಸದ ಬುಟ್ಟಿಯು ಟೆಕ್ ಸಮ್ಮಿಟ್ನಲ್ಲಿ ಗಮನಸೆಳೆದಿದೆ.

ಈ ಎಐ ಆಧಾರಿತ ಕಸದ ಬುಟ್ಟಿ ಯಂತ್ರದಲ್ಲಿ 6 ಬುಟ್ಟಿಗಳಿದ್ದು, ನೀವು ಬಿಸಾಕಬೇಕಿರುವ ವಸ್ತುವನ್ನು ಆ ಯಂತ್ರದ ಮುಂದೆ ಹಿಡಿದರೆ ಸಾಕು, ನಿಮ್ಮ ಕೈಯಲ್ಲಿ ಪ್ಲಾಸ್ಟಿಕ್ ಇದೆಯೋ, ಗಾಜಿನ ಬಾಟಲಿ ಇದೆಯೋ, ಹಸಿ ಪದಾರ್ಥವಿದೆಯೋ ಎಂಬುದನ್ನು ಎಐ ಸೆನ್ಸರ್ ಗುರುತಿಸಿ ಅದಕ್ಕೆ ತಕ್ಕುದಾದ ಬುಟ್ಟಿಯ ಬಾಗಿಲು ತೆರೆಯುತ್ತದೆ. ಅದರೊಳಗೆ ಹಾಕುವುದಷ್ಟೇ ನಮ್ಮ ಕೆಲಸ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಎಐಸ್ಮಾರ್ಟ್ ಬಿನ್ ಎಂಬ ಕಂಪನಿ ಅಭಿವೃದ್ಧಿಪಡಿಸಿರುವ ಈ ಕಸದ ಬುಟ್ಟಿಯ ಹೆಸರು ಬಿನ್ ಪ್ರೋ.
“ನಮ್ಮ ಸ್ಮಾರ್ಟ್ ಕಸದ ಬುಟ್ಟಿ ಶೇ.95ರಷ್ಟು ನಿಖರತೆಯೊಂದಿಗೆ ಕಸವನ್ನು ವಿಂಗಡಿಸುತ್ತದೆ. ಪೇಟೆಂಟ್ನೊಂದಿಗೆ ಮಾರುಕಟ್ಟೆಗೆ ಬಿನ್ ಪ್ರೊ ಅನ್ನು ತರುತ್ತಿದ್ದು, ಮೊದಲ ಹಂತದಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್ ಗಳು ನಮ್ಮ ಗುರಿಯಾಗಿದೆ. 400 ಲೀಟರ್ ಸಾಮರ್ಥ್ಯದ ಬಿನ್ ಪ್ರೊ ಬೆಲೆ 40,000 ರೂಪಾಯಿಯಿಂದ 1.5 ಲಕ್ಷ ರೂಪಾಯಿ ಆಗಲಿದೆ” ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಅನುಪಮ್ ಮಹಾಜನ್.
ಮುಂದಿನ ಹೆಜ್ಜೆಯಾಗಿ, ಎಐ ಸ್ಮಾರ್ಟ್ ಬಿನ್ ಕಂಪನಿಯು ಮಿಶ್ರ ಒಣ ತ್ಯಾಜ್ಯವನ್ನು ತಾನೇ ವಿಂಗಡಿಸುವಂತಹ ಪ್ರಪಂಚದಲ್ಲೇ ಪ್ರಪ್ರಥಮ ಯಂತ್ರವನ್ನು ಅಭಿವೃದ್ಧಿಪಡಿಸುವುದರಲ್ಲಿ ತೊಡಗಿಸಿಕೊಂಡಿದೆ. ಸಂಪೂರ್ಣ ಸ್ವಯಂ ಚಾಲಿತವಾಗಿ ಇರಲಿರುವ ಆ ಯಂತ್ರವು ಎಐ ಇಮೇಜಿಂಗ್, ರೋಬೋಟಿಕ್, ಕನ್ವೇಯರ್ ತಂತ್ರಜ್ಞಾನವನ್ನು ಒಳಗೊಂಡಿರಲಿದೆ. ಅದಕ್ಕೆ ಪೇಟೆಂಟ್ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಪಾರ್ಶ್ವವಾಯು ಪೀಡಿತ ರೋಗಿಗಳು, ವಿಶೇಷ ಚೇತನರಿಗಾಗಿ ‘ಎಲೆಕ್ಟ್ರಾನಿಕ್ ಮೊಬಿಲಿಟಿ ಸ್ಕೂಟರ್’
ಆಸ್ಟ್ರೀಚ್ ಮೊಬಿಲಿಟಿ ಸಂಸ್ಥೆಯು ಪಾರ್ಶ್ವವಾಯು ಪೀಡಿತ ರೋಗಿಗಳು, ವಿಶೇಷ ಚೇತನರಿಗಾಗಿ ತಯಾರಿಸಿರುವ ‘ಎಲೆಕ್ಟ್ರಾನಿಕ್ ಮೊಬಿಲಿಟಿ ಸ್ಕೂಟರ್’ ಅನ್ನು ಪ್ರದರ್ಶನದಲ್ಲಿ ಇಟ್ಟಿತ್ತು.
ತಮ್ಮ ಸಂಸ್ಥೆಯ ಸ್ಕೂಟರ್ ಬಗ್ಗೆ ವಿವರಿಸಿದ ಡಾ. ಸಚಿನ್, “ವೃದ್ಧರು, ಪಾರ್ಶ್ವವಾಯು ಪೀಡಿತ ರೋಗಿಗಳು, ವಿಶೇಷ ಚೇತನರಿಗಾಗಿ ಈ ಸ್ಕೂಟರ್ ಅನ್ನು ತಯಾರಿಸಿದ್ದೇವೆ. ಈ ಸ್ಕೂಟರ್ ಅನ್ನು ಒಂದು ಕೈಯ್ಯಲ್ಲಿ ಕೂಡ ಬಳಸಬಹುದು. ಇದನ್ನು ಸಾಮಾನ್ಯ ಸ್ಕೂಟರ್ನಂತೆ ಹೊರಗಡೆಯೂ ಬಳಸಬಹುದು. 1 ಲಕ್ಷದ 4 ಸಾವಿರ ಇದರ ಬೆಲೆ. ಪೂರ್ತಿ ಚಾರ್ಚ್ ಮಾಡಿದರೆ 40 ಕಿಲೋಮೀಟರ್ ತನಕ ಓಡಿಸಬಹುದು. ಇದರಲ್ಲಿ ಬ್ಲೂಟೂತ್ ಸೌಕರ್ಯವನ್ನು ಕೂಡ ಕಲ್ಪಿಸಿದ್ದೇವೆ. ಎದುರುಗಡೆ ಸುಮಾರು 5 ಕೆ.ಜಿ.ಯಷ್ಟು ಸಾಮಥ್ಯವನ್ನು ಹೊಂದಿರುವ ಬುಟ್ಟಿಯನ್ನು ಕೂಡ ನೀಡಲಾಗಿದೆ’ ಎಂದು ವಿವರಿಸಿದರು.

ಲೋಹದ ಪುಡಿಗಳನ್ನು ನೇರವಾಗಿ ಕರಗಿಸಲು ಅಥವಾ ಸಿಂಟರ್ ಮಾಡಲು ರಷ್ಯಾದಲ್ಲಿ ವಿನ್ಯಾಸಗೊಳಿಸಲಾದ 3D ಪ್ರಿಂಟರ್ ಸಾರ್ವಜನಿಕರ ಗಮನ ಸೆಳೆಯಿತು.
ಶಸ್ತ್ರಾಸ್ತ್ರಗಳ ಸ್ಥಳವನ್ನು ಪತ್ತೆ ಮಾಡುವ ‘ಸ್ವಾತಿ ರಾಡಾರ್’
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಕೂಡ ಈ ಬಾರಿಯ ಟೆಕ್ ಸಮ್ಮಿಟ್ನಲ್ಲಿ ‘ಸ್ವಾತಿ ವೆಪನ್ ಲೊಕೇಟಿಂಗ್ ರಾಡಾರ್’ (ಡಬ್ಲ್ಯುಎಲ್ ಆರ್) ಅನ್ನು ಕೂಡ ಪ್ರದರ್ಶನಕ್ಕಿಟ್ಟಿತ್ತು. ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದಿದ್ದ ಸಂಘರ್ಷದ ಸಂದರ್ಭದಲ್ಲಿ ಕೂಡ ಇದನ್ನು ಸೇನೆಯು ಬಳಸಿತ್ತು ಎಂದು ಡಿಆರ್ಡಿಒ ಅಧಿಕಾರಿ ಈದಿನ ಡಾಟ್ ಕಾಮ್ಗೆ ವಿವರಿಸಿದರು.

“ಡಬ್ಲ್ಯುಎಲ್ ಆರ್ ಶಸ್ತ್ರಾಸ್ತ್ರ ಸ್ಥಳ ಪತ್ತೆ ಹೆಚ್ಚುವ ಸಾಮರ್ಥ್ಯ ಹೊಂದಿದೆ. ಶತ್ರು ರಾಷ್ಟ್ರಗಳು ಭೂ, ವಾಯು ಹಾಗೂ ಜಲ ಮಾರ್ಗಗಳ ಮೂಲಕ ರಾಕೆಟ್, ಬಾಂಬ್ ದಾಳಿ ನಡೆಸಿದ ಸಂದರ್ಭದಲ್ಲಿ ಅವರ ಸ್ಥಳಗಳನ್ನು ಪತ್ತೆ ಮಾಡುತ್ತದೆ. ಇದರಿಂದ ಶತ್ರುಗಳ ಮೇಲೆ ಪ್ರತಿದಾಳಿ ನಡೆಸಲು ಸಹಕಾರಿಯಾಗಿದೆ. ಇತ್ತೀಚೆಗೆ ನಡೆದ ಸಂಘರ್ಷದ ವೇಳೆ ಕೂಡ ಸ್ವಾತಿ ರಾಡಾರ್ ಅನ್ನು ಬಳಸಿದೆ” ಎಂದು ತಿಳಿಸಿದರು.

‘ಟೈಟಾನ್’ ಮಿಲಿಟರಿ ಡ್ರೋನ್
ಭಾರತೀಯ ವಿಜ್ಞಾನ ಸಂಸ್ಥೆಯು (ಐ.ಐ.ಎಸ್.ಸಿ.) ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಬಹುಮುಖೀಯ ಕಾರ್ಯಾಚರಣೆಯ ‘ಟೈಟಾನ್’ ಮಿಲಿಟರಿ ಡ್ರೋನ್ ಬೆಂಗಳೂರು ಟೆಕ್ ಶೃಂಗದ ವಸ್ತುಪ್ರದರ್ಶನದಲ್ಲಿ ಗಮನ ಸೆಳೆದಿದೆ.
‘ಕಾಮ್ರೆಡೋ ಏರೋಸ್ಪೇಸ್’ ಕಂಪನಿಯು ಐ.ಐ.ಎಸ್.ಸಿ. ಸಹಯೋಗದಲ್ಲಿ ಇದನ್ನು ಅಭಿವೃದ್ಧಿಪಡಿಸಿರುವ ಈ ಡ್ರೋನ್ ಸುಲಭವಾಗಿ ಪರಸ್ಪರ ಬದಲಾಯಿಸಬಹುದಾದ ಪೇಲೋಡ್ಗಳನ್ನು ಬೆಂಬಲಿಸುತ್ತದೆ. ಮಾಡ್ಯುಲರ್ ಆರ್ಕಿಟೆಕ್ಟರ್ನೊಂದಿಗೆ ವೈವಿಧ್ಯಮಯ ಮಿಷನ್ ಪ್ರೊಫೈಲ್ಗಳು ಹಾಗೂ ಬಹು-ಕಾರ್ಯಾಚರಣೆಯ ಅಗತ್ಯಗಳಿಗೆ ಹೊಂದಿಕೊಳ್ಳುತ್ತದೆ.
ಸುಮಾರು 10 ಕೆಜಿ ತೂಕ ಹೊತ್ತೊಯ್ಯುವ ಸಾಮರ್ಥ್ಯದ ಈ ಡ್ರೋನ್, ಎಲೆಕ್ಟ್ರೋಡ್ ಆಪ್ಟಿಕಲ್ ಸೆನ್ಸಾರ್ ಗಳನ್ನು ಒಳಗೊಂಡಿದೆ. ಮಿಲಿಟರಿ ಮಾತ್ರವಲ್ಲದೆ ವಾಣಿಜ್ಯ ವಲಯದಲ್ಲೂ ಉಪಯುಕ್ತವಾಗಿದೆ.
ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರ ದಂಡು
ನ.20ರವರೆಗೆ ನಡೆಯುತ್ತಿರುವ ಟೆಕ್ ಸಮ್ಮಿಟ್ಗೆ ಆಸಕ್ತ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರ ದಂಡೇ ನೆರೆದಿತ್ತು. ಒಂದು ಕಡೆ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರದರ್ಶನ ನಡೆಯುತ್ತಿದ್ದರೆ, ಇನ್ನೊಂದೆಡೆ ಪ್ರಮುಖ ವೇದಿಕೆಗಳಲ್ಲಿ ಐಟಿಬಿಟಿ ಕ್ಷೇತ್ರದ ಮುಂದಿನ ಬೆಳವಣಿಗೆ, ಬೆಂಗಳೂರು ಆವಿಷ್ಕಾರ ವರದಿ, ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ತಂತ್ರಜ್ಞಾನದಲ್ಲಿ ಹೂಡಿಕೆ ವಿಚಾರ ವಿನಿಮಯ ನಡೆಯುತ್ತಿತ್ತು.



ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





