- ಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ ‘ಭಾರತ್ ಗೌರವ್ ಟೂರಿಸ್ಟ್’ ರೈಲು
- ರೈಲಿನ ಒಳಗೆ 9 ಮೃತದೇಹ ದೊರೆತಿದೆ ಎಂದ ಮಧುರೈ ಜಿಲ್ಲಾಧಿಕಾರಿ ಎಂ.ಎಸ್.ಸಂಗೀತಾ
ಉತ್ತರ ಪ್ರದೇಶದ ಲಕ್ನೋದಿಂದ ತಮಿಳುನಾಡಿನ ರಾಮೇಶ್ವರಂಗೆ ತೆರಳುತ್ತಿದ್ದ ‘ಭಾರತ್ ಗೌರವ್ ಟೂರಿಸ್ಟ್’ ರೈಲಿನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಬೆಂಕಿ ಕಾಣಿಸಿಕೊಂಡು, 9 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಧುರೈಯಲ್ಲಿ ಸಂಭವಿಸಿದೆ.
ಮಧುರೈ ರೈಲು ನಿಲ್ದಾಣದಿಂದ ಸುಮಾರು 1 ಕಿಮೀ ದೂರದಲ್ಲಿ ರೈಲು ನಿಂತಿದ್ದು, ತೀರ್ಥಯಾತ್ರೆ ಕೈಗೊಂಡಿದ್ದ ರೈಲಿನಲ್ಲಿದ್ದ ಭಕ್ತರು ಗ್ಯಾಸ್ ಸಿಲಿಂಡರ್ ಅನ್ನು ಬಳಸಿ ಕಾಫಿ ಮಾಡಲು ಹೋದಾಗ ಬೆಂಕಿ ಕಾಣಿಸಿಕೊಂಡಿದ್ದೇ ಈ ದುರಂತಕ್ಕೆ ಕಾರಣ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಒಂದು ಬೋಗಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆಯು ಪಕ್ಕದ ಬೋಗಿಗಳಿಗೆ ಕ್ಷಣ ಮಾತ್ರದಲ್ಲಿ ಹರಡಿದ ಪರಿಣಾಮ 9 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ ಎಂದು ವರದಿಯಾಗಿದೆ. ಏಕಾಏಕಿ ಉಂಟಾದ ಬೆಂಕಿಯಿಂದ ಬೋಗಿಯಲ್ಲಿದ್ದ ಪ್ರಯಾಣಿಕರು ಭಯಭೀತಗೊಂಡು ಎಲ್ಲೆಂದರಲ್ಲಿ ಓಡಿದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಹಲವು ಮಂದಿಯ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಪ್ರವಾಸದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಕೋಚ್ ಲಕ್ನೋದಿಂದ ಮಧುರೈಗೆ ಬೆಳಿಗ್ಗೆ 5.15 ರ ಸುಮಾರಿಗೆ ಆಗಮಿಸಿತ್ತು. ಮುಂಜಾನೆ 5:30 ರ ಸುಮಾರಿಗೆ ಮಧುರೈ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
‘ರೈಲು ಬೋಗಿಯಲ್ಲಿ ಕಾಫಿ ಮಾಡಲು ಗ್ಯಾಸ್ ಸ್ಟೌವ್ ಹೊತ್ತಿಸಿದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸದ್ಯಕ್ಕೆ ಒಂಭತ್ತು ಮೃತದೇಹಗಳನ್ನು ಹೊರತೆಗೆದಿದ್ದೇವೆ’ ಎಂದು ಮಧುರೈ ಜಿಲ್ಲಾಧಿಕಾರಿ ಎಂ.ಎಸ್.ಸಂಗೀತಾ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಮಧುರೈ ಜಿಲ್ಲಾಧಿಕಾರಿ ಎಂ.ಎಸ್.ಸಂಗೀತಾ ಕುಟುಂಬಸ್ಥರನ್ನು ಸಂತೈಸಲು ಶ್ರಮಿಸುತ್ತಿರುವ ದೃಶ್ಯವು ಕಂಡು ಬಂದಿದೆ.





