ಕನ್ನಡಿಗರ ಕೂಟ ದುಬೈ ಯುಎಇ ಮತ್ತು ಗಲ್ಫ್ ಕನ್ನಡ ಮೂವೀಸ್ ಜಂಟಿಯಾಗಿ ‘ಕರ್ನಾಟಕ ರಾಜ್ಯೋತ್ಸವ -2025’ ಕಾರ್ಯಕ್ರಮವು ಇಂದು(ನವೆಂಬರ್ 8) ದುಬೈಯ ಕಿಸೀಸ್ ನ ಜೆಮ್ಸ್ ಕೇಂಬ್ರಿಜ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ, ವಿಧಾನ ಪರಿಷತ್ ನೂತನ ಸದಸ್ಯೆಯಾಗಿ ಆಯ್ಕೆಗೊಂಡಿರುವ ಡಾ.ಆರತಿ ಕೃಷ್ಣ ಅವರು ಭಾಗವಹಿಸಲಿದ್ದು, ಇದು ಅವರ ಯುಎಇಯ ಮೊದಲ ಭೇಟಿಯಾಗಿದೆ. ಜೊತೆಗೆ ಡಾ.ಆರತಿ ಕೃಷ್ಣ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ವೇದಿಕೆ ಕೂಡ ಕಲ್ಪಿಸಲಾಗಿದೆ.
ಸಂಜೆ 4.30ರಿಂದ ರಾತ್ರಿಯ ವರೆಗೆ ಜರುಗುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಝೀ ಕನ್ನಡ ಕಾಮಿಡಿ ಕಿಲಾಡಿಗಳು ತಂಡದವರಿಂದ ಹಾಸ್ಯ ಮನೋರಂಜನೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅವರಿಗೆ ‘ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2025’, ಖ್ಯಾತ ಚಲನಚಿತ್ರ ನಟಿ ರಮ್ಯಾ ಅವರಿಗೆ ‘ಕನ್ನಡದ ಕಣ್ಮಣಿ ಪ್ರಶಸ್ತಿ -2025’ ಹಾಗು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊರವರಿಗೆ ‘ಅಂತಾರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ -2025’ ಅನ್ನು ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಯುಎಇಯಲ್ಲಿ ಇರುವ ಎಲ್ಲ ಕನ್ನಡಿಗರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ಮಾಧ್ಯಮದ ಮೂಲಕ ವಿನಂತಿಸಿದ್ದಾರೆ.








